ನ.8ರಿಂದ 1,191 ಅಂಗನವಾಡಿಗಳಲ್ಲಿ ಪುಟಾಣಿಗಳ ಕಲರವ; ಉಡುಪಿ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ

ಉಡುಪಿ, ನ.7: ಕೋವಿಡ್ -19 ಕಾರಣದಿಂದ ಸುಮಾರು ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳ ನಗುವಿನ ಕಲರವ ನಾಳೆಯಿಂದ ಆರಂಭಗೊಳ್ಳಲಿದ್ದು, ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕುಂದಾಪುರ ಮತ್ತು ಕಾರ್ಕಳದ ಒಟ್ಟು 4 ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ವ್ಯಾಪ್ತಿಯ 1191 ಅಂಗನವಾಡಿಗಳನ್ನು ಈಗಾಗಲೇ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು, ಕೇಂದ್ರಗಳ ಒಳ ಮತ್ತು ಹೊರ ಆವರಣಗಳನ್ನು, ಕಿಟಕಿ, ಬಾಗಿಲು, ಶೌಚಾಲಯಗಳನ್ನು ಸ್ವಚ್ಛಗೊಳಿಸ ಲಾಗಿದೆ. ಕೇಂದ್ರದಲ್ಲಿ ಮಕ್ಕಳು ಕುಳಿತುಕೊಳ್ಳುವ ಡೆಸ್ಕ್, ಕುರ್ಚಿ, ಆಟಿಕೆ ಸಾಮಾನುಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿದ್ದು, ಪೌಷ್ಠಿಕ ಆಹಾರ ತಯಾರಿಸುವ ಎಲ್ಲಾ ಪಾತ್ರೆ/ಲೋಟ/ಕುಕ್ಕರ್ಗಳನ್ನು ಸ್ವಚ್ಛಗೊಳಿಸಲಾಗಿದೆ.
ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಕಡ್ಡಾಯ ವಾಗಿ 2 ಡೋಸ್ ಕೋವಿಡ್ ಲಸಿಕೆಯನ್ನು ನೀಡಿದ್ದು, ಎರಡೂ ಲಸಿಕೆ ಪಡೆದಿ ರುವ ಕುರಿತಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪರಿಶೀಲಿಸಲಿದ್ದಾರೆ. ಅದೇ ರೀತಿ ಅವರಿಗೆ 72 ಗಂಟೆಗಳ ಮುಂಚೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಅಂಗನವಾಡಿಯಲ್ಲಿ ಮಕ್ಕಳನ್ನು ಒಂದು ಮೀಟರ್ ಅಂತರದಲ್ಲಿ ಕುಳಿತು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವಲ್ಲಿ ಸ್ಥಳದ ಕೊರತೆ ಕಂಡುಬಂದರೆ ಪ್ರತಿದಿನ ಎಷ್ಟು ಮಕ್ಕಳು ಬರಬೇಕು ಎಂಬುದರ ಬಗ್ಗೆ ತೀರ್ಮಾನಿಸಲಾಗುತ್ತದೆ. ಯಾವ ಮಕ್ಕಳು ಬರಬೇಕು ಎಂಬುದರ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮೊದಲ ಹಂತದಲ್ಲಿ ಬೆಳಗ್ಗೆ 10ರಿಂದ 12ರವರೆಗೆ ಮಾತ್ರ ಅಂಗನವಾಡಿ ಯನ್ನು ತೆರೆಯಲು ನಿರ್ಧರಿಸಿದ್ದು, ಮುಂದಿನ ಸೂಚನೆವರೆಗೆ ಪೂರಕ ಪೌಷ್ಠಿಕ ಆಹಾರವನ್ನು/ಆಹಾರ ಪದಾರ್ಥಗಳನ್ನು ಮನೆಗೆ ನೀಡಲಾಗುವುದು. 15 ದಿನಗಳ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪೌಷ್ಠಿಕ ಆಹಾರವನ್ನು ಕೇಂದ್ರ ದಲ್ಲಿಯೇ ನೀಡಲಾಗುವುದು. ಕೇಂದ್ರದಲ್ಲಿ ಆಹಾರ ತಯಾರಿಸುವವರು ಮುಖ ಗವಸು, ಹೆಡ್ ಕ್ಯಾಪ್ ಮತ್ತು ಏಪ್ರನ್ ಧರಿಸುವಂತೆ ಸೂಚನೆ ನೀಡಲಾಗಿದೆ.
ಅಂಗನವಾಡಿ ಆರಂಭದ ದಿನದಂದು ಕೆಂದ್ರಗಳಲ್ಲಿ ಹಬ್ಬದ ವಾತಾವರಣ ಇರುವಂತೆ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಕೇಂದ್ರಗಳನ್ನು ತಳಿರು ತೋರಣಗಳಿಂದ ಸಿಂಗರಿಸುವುದು, ಬಲೂನುಗಳಿಂದ ಅಲಂಕರಿಸುವುದು, ಪ್ರತಿ ಮಗುವನ್ನು ಗುಲಾಬಿ ಹೂ ನೀಡಿ ಸ್ವಾಗತಿಸುವುದು, ಪ್ರಾರಂಭದ ದಿನ ಸಿಹಿ ತಿನಿಸು ನೀಡುಂತೆ ಸೂಚನೆಗಳನ್ನು ನೀಡಲಾಗಿದೆ.
''ರಾಜ್ಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ಅನುಮೋದನೆಯಂತೆ ಜಿಲ್ಲೆಯಲ್ಲಿ ನ.8ರಿಂದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ವ್ಯವಸ್ಥಿತ ರೀತಿಯಲ್ಲಿ ಸಂಪೂರ್ಣ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲ ಅಂಗನವಾಡಿ ಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವಂತೆ ಸಂಬಂದಪಟ್ಟ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರಕ್ಕೆ ಬರುವ ಪ್ರತಿ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಕ್ರಮ ವಹಿಸಲಾಗಿದೆ. ಎಲ್ಲ ಅಂಗನವಾಡಿಗಳಲ್ಲಿ ಕೋವಿಡ್ ಸುರಕ್ಷಾ ಮಾರ್ಗಸೂಚಿ ಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು''.
-ಡಾ.ನವೀನ್ ಭಟ್, ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ, ಉಡುಪಿ







