ಕೃಷ್ಣಾ ಜಲ ವಿವಾದ: ಮಧ್ಯಕಾಲೀನ ಅರ್ಜಿ ತುರ್ತಾಗಿ ಕೈಗೆತ್ತಿಕೊಳ್ಳಲು ಕರ್ನಾಟಕ ಮನವಿ

ಬೆಂಗಳೂರು, ನ.8: ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣವು 29.11.2013ರಂದು ಅಂತಿಮವಾಗಿ ನೀಡಿರುವ ಐತೀರ್ಪನ್ನು ಕೇಂದ್ರ ಸರ್ಕಾರದ ಗೆಜೆಟ್ ನಲ್ಲಿ ಪ್ರಕಟಿಸಬೇಕೆಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸಲ್ಲಿಸಿರುವ ಮಧ್ಯಕಾಲೀನ ಅರ್ಜಿಗಳನ್ನು ನ.29ರಂದು ನ್ಯಾಯಾಲಯದ ಕಲಾಪ ಪಟ್ಟಿಯಲ್ಲಿ ಸೇರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯಪೀಠ ಇಂದು ಆದೇಶಿಸಿದೆ. ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ್ ಅವರಿದ್ದ ಪೀಠ ಈ ಪ್ರಕರಣವನ್ನು ಎರಡು ವಾರಗಳ ಕಾಲ ಮುಂದೂಡುವಂತೆ ತೆಲಂಗಾಣ ಮತ್ತು ಆಂಧ್ರ ರಾಜ್ಯಗಳು ಮಾಡಿದ ಮನವಿಯನ್ನು ಪುರಸ್ಕರಿಸಿತು.
ಆದರೆ ಕರ್ನಾಟಕದ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್, ನ್ಯಾಯಾಧೀಕರಣದ ಐತೀರ್ಪಿನ ನಂತರ ಕರ್ನಾಟಕವು 13 ಸಾವಿರ ಕೋಟಿ ರೂ. ವೆಚ್ಚ ಮಾಡಿ 1,205 ಕಿ.ಮೀ. ಉದ್ದದ ಕಾಲುವೆ ಸರಪಳಿಯನ್ನು ನಿರ್ಮಿಸಿ ಕೊಂಡಿದೆ. ಈ ಕಾಲುವೆಗಳಿಗೆ ಹರಿಯಬೇಕಾದ ನೀರು ಬಂಗಾಳ ಕೊಲ್ಲಿಗೆ ವ್ಯರ್ಥವಾಗಿ ಹರಿಯುತ್ತಿದೆ. ಆದ್ದರಿಂದ ಈ ಪ್ರಕರಣದ ವಿಚಾರಣೆ ಅತ್ಯಂತ ತುರ್ತಾಗಿ ನಡೆಯಬೇಕಾಗಿದೆ. ಗೆಜೆಟ್ ಪ್ರಕಟನೆಮಹತ್ವದ ವಿಷಯವಾಗಿದೆ. ಎರಡು ವಾರಗಳ ನಂತರ ಇದನ್ನು ಪಟ್ಟಿ ಮಾಡಬೇಕು. ಕರ್ನಾಟಕವು ಗೆಜೆಟ್ ಪ್ರಕಟನೆ ಕೋರಿ ಸಲ್ಲಿಸಿದ ಮಧ್ಯಕಾಲೀನ ಅರ್ಜಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ನ್ಯಾಯವಾದಿಗಳು ಇದೇ ವಿಷಯವಾಗಿ ತಮ್ಮ ರಾಜ್ಯದ ಮಧ್ಯಕಾಲೀನ ಅರ್ಜಿಯನ್ನು ಸಹ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಕೋರಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ಗೆಜೆಟ್ ಪ್ರಕಟನೆ ಕೋರಿರುವ ಮಧ್ಯಕಾಲೀನ ಅರ್ಜಿಗಳನ್ನು 29.11.2021ರಂದು ನ್ಯಾಯಾಲಯದ ಕಲಾಪ ಪಟ್ಟಿಗೆ ಸೇರಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿತು. ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಈ ಪ್ರಕರಣದಲ್ಲಿ ವಾದಿಯನ್ನಾಗಿಸುವುದಕ್ಕೆ ಕರ್ನಾಟಕವು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ಮಾನ್ಯ ಮಾಡಿತು. ಪ್ರಕರಣವನ್ನು ನ.29ಕ್ಕೆ ಮುಂದೂಡಲಾಯಿತು.







