ಮಂಗಳೂರು; ಯುವತಿಗೆ ಅಶ್ಲೀಲ ಸಂದೇಶ ಆರೋಪ; ಸೈಬರ್ ಪೊಲೀಸರಿಂದ ಯುವಕನ ಬಂಧನ
![ಮಂಗಳೂರು; ಯುವತಿಗೆ ಅಶ್ಲೀಲ ಸಂದೇಶ ಆರೋಪ; ಸೈಬರ್ ಪೊಲೀಸರಿಂದ ಯುವಕನ ಬಂಧನ ಮಂಗಳೂರು; ಯುವತಿಗೆ ಅಶ್ಲೀಲ ಸಂದೇಶ ಆರೋಪ; ಸೈಬರ್ ಪೊಲೀಸರಿಂದ ಯುವಕನ ಬಂಧನ](https://www.varthabharati.in/sites/default/files/images/articles/2021/11/8/313048-1636388861.jpeg)
ಮಂಗಳೂರು, ನ.8: ಮದುವೆ ನಿಗದಿಯಾಗಿದ್ದ ಯುವತಿಯೊಬ್ಬಳಿಗೆ ಆಕೆಯನ್ನು ಮದುವೆಯಾಗಲಿದ್ದ ಯುವಕನೇ ಅಶ್ಲೀಲ ಹಾಗೂ ವಿಚಿತ್ರ ಸಂದೇಶ ಕಳುಹಿಸುತ್ತಿದ್ದು, ಈ ಬಗ್ಗೆ ಯುವತಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತನನ್ನು ಕುದ್ರೋಳಿ ಆಳಕೆ ನಿವಾಸಿ ಶ್ರೀನಿವಾಸ ಭಟ್ (35) ಎಂದು ಗುರುತಿಸಲಾಗಿದೆ.
ಆರೋಪಿ ನಗರದ ಯುವತಿಯೊಬ್ಬಳ ಜೊತೆ ಮದುವೆಗೆ ಮಾತುಕತೆ ನಡೆದಿತ್ತು. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ಸೂಚಿಸಿದ್ದು, ಇದರ ಪ್ರಕ್ರಿಯೆ ನಡೆಯುತ್ತಿತ್ತು. ಈ ಮಧ್ಯೆ ಶ್ರೀನಿವಾಸ್ ಮದುವೆಯಾಗಲಿದ್ದ ಯುವತಿಯ ಮೊಬೈಲ್ ನಂಬರ್ ಪಡೆದು ಚಾಟಿಂಗ್ ಆರಂಭಿಸಿದ್ದಾನೆ. ನಂತರ ಯುವತಿ ಜೊತೆ ಸಲುಗೆಯಿಂದ ಮಾತನಾಡಿದ ಶ್ರೀನಿವಾಸ್ ಅಶ್ಲೀಲ, ವಿಚಿತ್ರ ಸಂದೇಶ ಹಾಕುತ್ತಿದ್ದ. ಇದು ಯುವತಿಗೆ ತೀರಾ ಇರಿಸು ಮುರಿಸು ಉಂಟು ಮಾಡುತ್ತಿತ್ತು. ಈ ವಿಚಾರವನ್ನು ಯುವತಿ ಮನೆಯವರ ಗಮನಕ್ಕೆ ತಂದಿದ್ದು, ಕೂಡಲೇ ಕುಟುಂಬಸ್ಥರು ನಿಶ್ಚಿತಾರ್ಥ ಮುಂದೂಡಿದ್ದರು ಎನ್ನಲಾಗಿದೆ.
ಇದರ ನಡುವೆ ಶ್ರೀನಿವಾಸ್ ಸಲಿಂಗ ಕಾಮಕ್ಕೆ ಸಂಬಂಧಿಸಿದ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದು, ಈ ವರ್ತನೆಯಿಂದ ಮತ್ತಷ್ಟು ನೊಂದುಕೊಂಡ ಯುವತಿ ನಗರದ ಸೈಬರ್ ಠಾಣೆಗೆ ಯುವಕನ ವಿರುದ್ಧ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.