ಸಿಂಘು ಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೈತನ ಮೃತದೇಹ ಪತ್ತೆ

ಹೊಸದಿಲ್ಲಿ: ದಿಲ್ಲಿ ಸಮೀಪದ ಸಿಂಘು ಗಡಿಯಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರೊಬ್ಬರು ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಪಂಜಾಬ್ನ ಫತೇಘರ್ ಸಾಹಿಬ್ನ ಅಮ್ರೋಹ್ ಜಿಲ್ಲೆಯ ನಿವಾಸಿ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಗುರುಪ್ರೀತ್ ಸಿಂಗ್ ಸಿಧುಪುರದ ಭಾರತೀಯ ಕಿಸಾನ್ ಯೂನಿಯನ್ನ ಜಗಜಿತ್ ಸಿಂಗ್ ದಲ್ಲೆವಾಲ್ ಬಣದೊಂದಿಗೆ ನಂಟು ಹೊಂದಿದ್ದರು.
ಕುಂಡ್ಲಿ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಹಾಗೂ ಗುರುಪ್ರೀತ್ ಸಿಂಗ್ ಸಾವಿನ ತನಿಖೆಯನ್ನು ಆರಂಭಿಸಿದ್ದಾರೆ. ಸಾವಿನ ಹಿಂದಿನ ಕಾರಣವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಕಳೆದ ತಿಂಗಳು ಲಖ್ಬೀರ್ ಸಿಂಗ್ ಎಂಬ ಕಾರ್ಮಿಕನ ಮೃತದೇಹವು ಸಿಂಘು ಗಡಿಯಲ್ಲಿ ಬ್ಯಾರಿಕೇಡ್ಗೆ ಕಟ್ಟಲ್ಪಟ್ಟಿದ್ದು, ಕೈಯನ್ನು ಕತ್ತರಿಸಿದ ಹಾಗೂ ಹರಿತವಾದ ಆಯುಧಗಳಿಂದ ಉಂಟಾದ ಅನೇಕ ಗಾಯಗಳೊಂದಿಗೆ ಕಂಡುಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನಿಹಾಂಗ್ ಸಂಘಟನೆಯ ಇಬ್ಬರು ಸದಸ್ಯರನ್ನು ಬಂಧಿಸಲಾಯಿತು ಮತ್ತು ಇನ್ನಿಬ್ಬರು ಸೋನಿಪತ್ ಪೊಲೀಸರ ಮುಂದೆ "ಶರಣಾಗತರಾಗಿದ್ದರು".
ಪಂಜಾಬ್, ಹರ್ಯಾಣ ಹಾಗೂ ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ಕಳೆದ ವರ್ಷ ನವೆಂಬರ್ 26 ರಿಂದ ಸಿಂಘು ಮತ್ತು ಟಿಕ್ರಿ ಸೇರಿದಂತೆ ಹಲವು ದಿಲ್ಲಿ ಗಡಿ ಭಾಗಗಳಲ್ಲಿ ಮೊಕ್ಕಾಂ ಹೂಡಿದ್ದಾರೆ, ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಹಾಗೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕೆಂದು ಒತ್ತಾಯಿಸಿದರು.