ಬನಾರಸ್ ವಿವಿ ಪೋಸ್ಟರ್ನಲ್ಲಿ ಉರ್ದು ಕವಿ ಅಲ್ಲಾಮಾ ಇಕ್ಬಾಲ್ ಫೋಟೋ; ಎಬಿವಿಪಿ ವಿರೋಧ
ಪ್ರತಿಭಟನೆ ಬಳಿಕ ಜಾಲತಾಣದಿಂದ ಪೋಸ್ಟರ್ ತೆರವು

ಹೊಸದಿಲ್ಲಿ,ನ.10: ಬನಾರಸ್ ಹಿಂದೂ ವಿವಿಯ ಉರ್ದು ವಿಭಾಗವು ಪಾಕಿಸ್ತಾನದ ಉದಯಕ್ಕೆ ಕಾರಣವಾದ ಚಳವಳಿಯ ಪ್ರೇರಕನೆಂದು ಬಣ್ಣಿಸಲಾಗುವ ಉರ್ದು ಕವಿ, ಸಾಹಿತಿ ಅಲ್ಲಾಮಾ ಇಕ್ಬಾಲ್ ಅವರ ಛಾಯಾಚಿತ್ರದ ಪೋಸ್ಟರ್ಅನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಬಳಿಕ ವಿವಾದದ ಭುಗಿಲೆದ್ದಿದೆ.
ಶ್ರೇಷ್ಠ ಉರ್ದು ಕವಿಗಳಲ್ಲೊಬ್ಬರೆನಿಸಿರುವ ಅಲ್ಲಾಮಾ ಇಕ್ಬಾಲ್ ದ್ವಿರಾಷ್ಟ್ರ ಸಿದ್ಧಾಂತದ ಪ್ರಬಲ ಪ್ರತಿಪಾದಕರಾಗಿದ್ದರು. ಅವರು 1938ರಲ್ಲಿ ಕೊನೆಯುಸಿರೆಳೆದರು ಹಾಗೂ 1947ರಲ್ಲಿ ಪಾಕಿಸ್ತಾನವು ರಚನೆಯಾಗಿತ್ತು.
ಅಲ್ಲಾಮಾ ಇಕ್ಬಾಲ್ ಅವರ ವಿವಾದಿತ ಪೋಸ್ಟರ್ ಬಗ್ಗೆ ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿದ್ದರು ಹಾಗೂ ವಿವಿಯ ಸಂಸ್ಥಾಪಕ ಮದನ್ ಮೋಹನ್ ಮಾಳವೀಯ ಅವರ ಛಾಯಾಚಿತ್ರ ಇಲ್ಲದೆ ಇರುವುದರ ಪ್ರಶ್ನಿಸಿದ ಬಳಿಕ ಉರ್ದು ವಿಭಾಗದ ಮುಖ್ಯಸ್ಥ ಅಫ್ತಾಬ್ ಅಹ್ಮದ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದರು.
ಸೋಮವಾರ ಸಂಜೆ ಎಬಿವಿಪಿ ವಿದ್ಯಾರ್ಥಿಗಳು ವಿವಾದಿತ ಪೋಸ್ಟರ್ ವಿರುದ್ಧ ಪ್ರತಿಭಟನೆ ನಡೆಸಿದ್ದರು ಹಾಗೂ ಈ ಬಗ್ಗೆ ಬನಾರಸ್ ಹಿಂದೂ ವಿವಿಯ ಅಧಿಕಾರಿಗಳಿಗೆ ಮನವಿಪತ್ರವೊಂದನ್ನು ಸಲ್ಲಿಸಿದ್ದರು.
ವೆಬಿನಾರ್ ಸಮಾವೇಶವೊಂದಕ್ಕಾಗಿ ವಿನ್ಯಾಸಗೊಳಿಸಲಾಗಿದ್ದ ಈ ಪೋಸ್ಟರ್ ಅನ್ನು ಎಬಿವಿಪಿಯ ವಿರೋಧದ ಬಳಿಕ ಫೇಸ್ಬುಕ್ನಿಂದ ತೆಗೆದುಹಾಕಲಾಗಿತ್ತು. ಆನಂತರ ಉರ್ದು ವಿಭಾಗದ ಮುಖ್ಯಸ್ಥರು ಇಕ್ಬಾಲ್ ಬದಲಿಗೆ ಮಾಳವೀಯ ಅವರ ಛಾಯಾಚಿತ್ರವಿರುವ ಹೊಸ ಪೋಸ್ಟರ್ ಅನ್ನು ಶೇರ್ ಮಾಡಿದ್ದರು. ಈ ಮೊದಲು ಪ್ರಸಾರವಾದ ಪೋಸ್ಟರ್ನಲ್ಲಿ ಅಚಾತುರ್ಯದಿಂದಾದ ಪ್ರಮಾದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟಿಸಿದ್ದಾರೆ.
ಬಿಎಚ್ಯು ವಿವಿಯಲ್ಲಿ ಪಾಕಿಸ್ತಾನಿ ನಾಯಕನ ವೈಭವೀಕರಣವಾಗಿರುವುದು ದುರದೃಷ್ಟಕರ ಎಂದು ಎಬಿವಿಪಿ ವಿದ್ಯಾರ್ಥಿಗಳು ಮನವಿ ಪತ್ರದಲ್ಲಿ ತಿಳಿಸಿದ್ದರು.
ವಿವಾದ ಭುಗಿಲೇಳುತ್ತಿದ್ದಂತೆಯೇ ವಿಶ್ವವಿದ್ಯಾನಿಲಯವು ಅಹ್ಮದ್ ಅವರಿಗೆ ಎಚ್ಚರಿಕೆ ಪತ್ರವೊಂದನ್ನು ನೀಡಿ, ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಹೇಗೆ ಈ ಪೋಸ್ಟರ್ ಅನ್ನು ಶೇರ್ ಮಾಡಲಾಗಿದೆ ಎಂದು ಅದು ಪ್ರಶ್ನಿಸಿತು. ವಿಷಯದ ಬಗ್ಗೆ ವಿಚಾರಣೆ ನಡೆಸಲು ವಿವಿಯು ಸಮಿತಿಯೊಂದನ್ನು ರಚಿಸಿದ್ದು, ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಎಂ.ಕೆ. ಪಾಂಡೆ ಅವರು ತನಿಖಾ ಸಮಿತಿಯ ನೇತೃತ್ವ ವಹಿಸಲಿದ್ದಾರೆ.