'ಟಿಪ್ಪು ಸುಲ್ತಾನ - ಹಿಂದೂ, ಕ್ರೈಸ್ತ ವಿರೋಧಿಯೇ ?' ಲೇಖಕ ಇಸ್ಮತ್ ಫಜೀರ್ ಪುಸ್ತಕ ಬಿಡುಗಡೆ
![ಟಿಪ್ಪು ಸುಲ್ತಾನ - ಹಿಂದೂ, ಕ್ರೈಸ್ತ ವಿರೋಧಿಯೇ ? ಲೇಖಕ ಇಸ್ಮತ್ ಫಜೀರ್ ಪುಸ್ತಕ ಬಿಡುಗಡೆ ಟಿಪ್ಪು ಸುಲ್ತಾನ - ಹಿಂದೂ, ಕ್ರೈಸ್ತ ವಿರೋಧಿಯೇ ? ಲೇಖಕ ಇಸ್ಮತ್ ಫಜೀರ್ ಪುಸ್ತಕ ಬಿಡುಗಡೆ](https://www.varthabharati.in/sites/default/files/images/articles/2021/11/11/313367-1636618380.jpg)
ಪುತ್ತೂರು: ಲೇಖಕರಾದ ಇಸ್ಮತ್ ಫಜೀರ್ ಬರೆದ 'ಟಿಪ್ಪು ಸುಲ್ತಾನ - ಹಿಂದೂ, ಕ್ರೈಸ್ತ ವಿರೋಧಿಯೇ? ಸುಳ್ಳು ಸತ್ಯಗಳ ಒಂದು ಪರಾಮರ್ಶೆ' ಎಂಬ ಪುಸ್ತಕವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸಹಯೋಗದಲ್ಲಿ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಸಭಾಂಗಣದಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು.
ದಲಿತ ಮುಖಂಡರಾದ ಆನಂದ ಮಿತ್ತಬೈಲು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಇಸ್ಮತ್ ಫಜೀರ್ ಮಾತನಾಡಿ ಧರ್ಮದ ನೆಲೆಯಲ್ಲಿ ಒಡೆದುಹೋದ ಸಮಾಜದ ಚರಿತ್ರೆಯನ್ನು ವಕ್ರಕಣ್ಣಿನಿಂದ ನೋಡಲಾಗುತ್ತಿದೆ. ಧರ್ಮದ ಆಧಾರಿತವಾಗಿ ಸಮಾಜವನ್ನು ಕಟ್ಟುವ ರಾಜಕಾರಣ ಇದ್ದಲ್ಲಿ ಮತೀಯ ನೆಲೆಯಲ್ಲಿ ಚರಿತ್ರೆಯನ್ನು ಪುನರ್ ರೂಪಿಸುವ ಹುನ್ನಾರಗಳು ಅತ್ಯಂತ ವ್ಯವಸ್ಥಿತವಾಗಿ ನಡೆದಿರುತ್ತದೆ. ಜಾತ್ಯಾತೀತ ತತ್ವವೇ ಸಾಮಾಜಿಕ ಸಂರಚನೆ ಮೌಲ್ಯವೆಂದು ಸಂವಿಧಾನ ರೂಪಿಸಿರುವ ಭಾರತದ ಇತ್ತೀಚಿಗಿನ ದಿನಗಳಲ್ಲಿ ಧರ್ಮಾಧಾರಿತ ಮತೀಯ ರಾಜಕಾರಣ ಮುನ್ನಲೆಗೆ ಬಂದು ಭಾರತದ ಅತ್ಯಂತ ಸಮರ್ಥ ರಾಜನಾದ ಟಿಪ್ಪು ಸುಲ್ತಾನರ ಚರಿತ್ರೆಯನ್ನು ರಾಜರ ಚರಿತ್ರೆಯನ್ನಾಗಿ ನೋಡದೆ ಮತೀಯ ದೃಷ್ಠಿಕೋನದಲ್ಲಿ ತಿರುಚುವ ಕೆಲಸವೇ ಪ್ರಧಾನವಾಗಿ ನಡೆದಿದೆ. ಈ ನಿಟ್ಟಿನಲ್ಲಿ ಟಿಪ್ಪು ಸುಲ್ತಾನರ ಚರಿತ್ರೆಯ ಸತ್ಯಾ ಸತ್ಯತೆ ಜನತೆಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಈ ಪುಸ್ತಕವನ್ನು ಬರೆದಿದ್ದೇನೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾನವ ಹಕ್ಕು ಹೋರಾಟಗಾರರಾದ ಮಹಮ್ಮದ್ ಕಕ್ಕಿಂಜೆ, ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಉಪಸ್ಥಿತರಿದ್ದರು.