ಸೆಲ್ಫೀ ವಿಡಿಯೋ ಚಿತ್ರೀಕರಣ ವೇಳೆ ಅವಘಡ: ನೀರಿಗೆ ಬಿದ್ದ ಯುವಕನಿಗಾಗಿ ಮುಂದುವರೆದ ಶೋಧ
ಉಪ್ಪಿನಂಗಡಿ: ಇಲ್ಲಿನ ಠಾಣಾ ವ್ಯಾಪ್ತಿಯ ಬರ್ಚಿನಹಳ್ಳ ಎಂಬಲ್ಲಿನ ಗುಂಡ್ಯ ಹೊಳೆಯಲ್ಲಿ ಬುಧವಾರದಂದು ಸೆಲ್ಫೀ ವಿಡಿಯೋ ಮಾಡುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು, ನಾಪತ್ತೆಯಾದ ರಾಜಸ್ಥಾನ್ ಮೂಲದ ಸೀತಾರಾಮ್ (19) ಗುರುವಾರ ದಿನವಿಡೀ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗದೇ ಇರುವುದರಿಂದ ಶೋಧ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.
ಬೆಂಗಳೂರಿನಿಂದ ವಾಹನಗಳ ಬಿಡಿ ಭಾಗಗಳನ್ನು ಮಂಗಳೂರಿನ ಮಾರಾಟ ಮಳಿಗೆಗಳಿಗೆ ವಿತರಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಹೊಳೆಯ ರಮಣೀಯತೆಯನ್ನು ಕಂಡು ಹೆದ್ದಾರಿ ಬದಿ ವಾಹನ ನಿಲ್ಲಿಸಿ ಹೊಳೆಗೆ ಇಳಿದಿದ್ದ ಸೀತಾರಾಮ್, ತನ್ನ ವಾಹನದ ಚಾಲಕ ಧರ್ಮರಾಮ್ ಎಂಬವರ ವಿಡಿಯೋ ಚಿತ್ರೀಕರಣಕ್ಕೆ ಒಳಗಾಗಲು ಮುಂದಾಗುತ್ತಿದ್ದಂತೆಯೇ ಬಂಡೆ ಕಲ್ಲಿನ ಮೇಲಿಂದ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ಬುಧವಾರ ರಾತ್ರಿಯಾಗುತ್ತಿದ್ದಂತೆಯೇ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಗುರುವಾರದಂದು ಶೋಧ ಕಾರ್ಯಾಚರಣೆಯನ್ನು ಪುನರಾರಂಭಸಿಲಾಯಿತು. ಅಗ್ನಿ ಶಾಮಕದಳ, ನುರಿತ ಈಜುಗಾರರು, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಈಜು ಪಟುಗಳು ಜೊತೆಯಾಗಿ ಹೊಳೆಗಿಳಿದು ಶೋಧ ಕಾರ್ಯಾಚರಣೆ ನಡೆಸಿದರು. ಮೈ ಕೊರೆಯುವ ಮಂಜಿನಂತಿದ್ದ ನೀರನ್ನೂ ಲೆಕ್ಕಿಸದೆ ಶೋಧ ಕಾರ್ಯವನ್ನು ನಡೆಸಲಾಯಿತ್ತಾದರೂ ಯುವಕನ ಸುಳಿವು ಪತ್ತೆಯಾಗಲಿಲ್ಲ.