ಉಳ್ಳಾಲ: ಯುವಕನಿಗೆ ಚೂರಿ ಇರಿತ; ಪ್ರಕರಣ ದಾಖಲು
![ಉಳ್ಳಾಲ: ಯುವಕನಿಗೆ ಚೂರಿ ಇರಿತ; ಪ್ರಕರಣ ದಾಖಲು ಉಳ್ಳಾಲ: ಯುವಕನಿಗೆ ಚೂರಿ ಇರಿತ; ಪ್ರಕರಣ ದಾಖಲು](https://www.varthabharati.in/sites/default/files/images/articles/2021/11/12/313503-1636716543.gif)
ಉಳ್ಳಾಲ: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಯುವಕನೋರ್ವನಿಗೆ ತಂಡವೊಂದು ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆನ್ನಲಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಜ್ಜಿನಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಚೂರಿ ಇರಿತಕ್ಕೊಳಗಾದ ಯುವಕನನ್ನು ಅಜ್ಜಿನಡ್ಕ ನಿವಾಸಿ ಇಕ್ಬಾಲ್ (32) ಎಂದು ಗುರುತಿಸಲಾಗಿದೆ.
ಅವರು ಕೆಲಸ ಮುಗಿಸಿ ಮನೆಗೆ ತನ್ನ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಇಮ್ತಿಯಾಝ್ ಮತ್ತು ಶಫೀಕ್ ಎಂಬವರು ತಡೆದು ನಿಲ್ಲಿಸಿ ಚೂರಿಯಿಂದ ಇರಿದಿದ್ದಾರೆಂದು ಆರೋಪಿಸಲಾಗಿದೆ. ಹಳೇ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆನ್ನಲಾಗಿದೆ.
ಗಾಯಗೊಂಡ ಇಕ್ಬಾಲ್ ಅವರನ್ನು ತೊಕ್ಕೊಟ್ಟುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಕ್ಬಾಲ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನಕ್ಕೆ ಎಸ್ ಡಿಪಿಐ ಒತ್ತಾಯ
ಅಜ್ಜಿನಡ್ಕದಲ್ಲಿ ಎಸ್ ಡಿಪಿಐ ಕಾರ್ಯಕರ್ತ ಇಕ್ಬಾಲ್ ಎಂಬವರ ಮೇಲೆ ದಾಳಿ ನಡೆಸಿರುವುದನ್ನು ಎಸ್ ಡಿಪಿಐ ಖಂಡಿಸಿದೆ. ಘಟನೆಯನ್ನು ಖಂಡಿಸಿರುವ ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಝಾಹಿದ್ ಮಲಾರ್, ಕೂಡಲೇ ಕೊಲೆ ಯತ್ನ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.