‘ಚೂಡಾಮಣಿ ಲಂಕಾದಹನ’ ಯಕ್ಷಗಾನ ಗೊಂಬೆಯಾಟ ಪ್ರದರ್ಶನ

ಬ್ರಹ್ಮಾವರ, ನ.12: ಮಟಪಾಡಿ ಶ್ರೀನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಪ್ರಾಯೋಜಕತ್ವದಲ್ಲಿ ಕುಂದಾಪುರ ಉಪ್ಪಿನಕುದ್ರು ಶ್ರೀಗಣೇಶ ಯಕ್ಷಗಾನ ಗೊಂಬೆ ಯಾಟ ಮಂಡಳಿ ಇವರಿಂದ ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ನ ಬೆಳ್ಳಿಹಬ್ಬದ ಸಂಭ್ರಮ ಹಾಗೂ ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ ಪ್ರಯುಕ್ತ ಚೂಡಾಮಣಿ ಲಂಕಾದಹನ ಯಕ್ಷಗಾನ ಗೊಂಬೆ ಯಾಟ ಪ್ರದರ್ಶನ ಮಟಪಾಡಿ ಚಪ್ಟೇಗಾರ್ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.
ಯಕ್ಷಗಾನ ಪಾತ್ರಧಾರಿ ವೇಷ ತೊಟ್ಟ ಗೊಂಬೆಗಳನ್ನು ಸೂತ್ರದ ಮೂಲಕ ಕುಣಿಸಿದ ಸೂತ್ರಧಾರ ಪ್ರತಿ ಗೊಂಬೆಯ ಕುಣಿತಕ್ಕೆ ಆ ಕ್ಷಣದಲ್ಲಿ ವಿವರಗಳನ್ನು ನೀಡುತ್ತಾ ಹೋದರು. ಗೊಂಬೆ ಕುಣಿತದ ವೇದಿಕೆಯಲ್ಲಿರುವ ಭಾಗವತರು, ಗೊಂಬೆಗಳ ಕುಣಿತಕ್ಕೆ ತಕ್ಕಂತೆ ಯಕ್ಷಗಾನ, ಪದ್ಯ ಹಾಡುವಾಗ ಚಂಡೆ, ಮದ್ದಳೆ, ತಾಳ, ಹಾರ್ಮೊನೀಯಮ್ ಒಳಗೊಂಡ ಹಿಮ್ಮೇಳದವರು ಸಾಥ್ನೀಡಿದರು. ಕಿಕ್ಕಿರುದು ತುಂಬಿದ ಸಭಾಭವನದಲ್ಲಿನ ಪ್ರೇಕ್ಷಕರು ತನ್ಮಯರಾಗಿ ಗೊಂಬೆ ಕುಣಿತ ಆನಂದಿಸಿದರು,
ಬಳಿಕ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಸ್ತುವಾರಿ ಭಾಸ್ಕರ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಮಟಪಾಡಿ ಗೌರವಾಧ್ಯಕ್ಷರಾದ ಚಂದ್ರಶೇಖರ ಕಲ್ಕೂರ, ಅಧ್ಯಕ್ಷ ಸ್ಯಾಮ್ಸನ್ ಸಿಕ್ವೇರಾ, ಸೊರ್ಪು ಸದಾನಂದ ಪಾಟೀಲ್ ಉಪಸ್ಥಿತರಿದ್ದರು. ಚೇತನ್ ಮಟಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶರೋನ್ ಸಿಕ್ವೇರಾ ವಂದಿಸಿದರು.





