ಕೃಷಿ ಕೆಲಸದಲ್ಲಿ ತೊಡಗಿದರೆ ಯಾವುದೇ ಒತ್ತಡ ಇರುವುದಿಲ್ಲ: ಡಾ. ಶ್ರೀ ಶಿವಮೂರ್ತಿ ಮರುಘ ಶರಣರು
ಶಿವಮೊಗ್ಗದಲ್ಲಿ ಕೃಷಿ ಮೇಳ ಉದ್ಘಾಟನೆ

ಶಿವಮೊಗ್ಗ,ನ.12: ವಾಣಿಜ್ಯ ಬೆಳೆಗಳಿಗಿಂತ ಮುಖ್ಯವಾಗಿ ಬಹುಬೆಳೆಗಳನ್ನು ರೈತರು ಬೆಳೆದು ಆರ್ಥಿಕ ಸಬಲರಾಗುವಂತೆ ಚಿತ್ರದುರ್ಗ ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮರುಘ ಶರಣರು ಕರೆ ನೀಡಿದರು.
ಶುಕ್ರವಾರ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಗೆ ವಿವಿ ವತಿಯಿಂದ ನವುಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಒಂದೇ ಬಗೆಯ ವಾಣಿಜ್ಯ ಬೆಳೆ ಬೆಳೆದು ನಷ್ಟ ಅನುಭವಿಸುವುದಕ್ಕಿಂತ ಬಹುಬೆಳೆಯಲ್ಲಿ ನಷ್ಟವಿಲ್ಲದೆ ಜೀವನ ನಡೆಸಬಹುದಾಗಿದೆ. ಪ್ರಗತಿಪರ ಕೃಷಿಯಿಂದ ಹೆಚ್ಚಿನ ಲಾಭಗಳಿಸಬಹುದಾಗಿದೆ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕುತ್ತಿಲ್ಲ ಎಂಬ ಅಳಲು ಬಹಳ ವರ್ಷ ಗಳಿಂದ ಇದೆ ಇದನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬಹುಬೆಳೆ ಪದ್ಧತಿ ಎಲ್ಲಾ ರೈತರಿಗೂ ಅನುಕೂಲಕರ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಎಂದು ಹೇಳಿದರು.
ಕೃಷಿ ಕೆಲಸದಲ್ಲಿ ತೊಡಗಿದರೆ ಯಾವುದೇ ಒತ್ತಡ ಇರುವುದಿಲ್ಲ. ರೋಗ ಮುಕ್ತ ಜೀವನ ನಡೆಸಬಹುದಾಗಿದೆ. ಕೃಷಿ ಕೆಲಸದಲ್ಲಿ ತೊಡಗಿದರೆ ವಾಕ್ ಮಾಡುವ ಸಂದರ್ಭವವೇ ಬರುವುದಿಲ್ಲ, ರಾಗಿ ಹಾಗೂ ಸಿರಿ ಧಾನ್ಯ ಗಳನ್ನು ಪ್ರತಿ ನಿತ್ಯ ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಜೀವನ ಪದ್ಧತಿ ಬದಲಾಯಿಸಿಕೊಳ್ಳಬೇಕಿದೆ. ಯಾಂತ್ರಿಕ ಜೀವನದಿಂದ ಹೊರ ಬರಬೇಕಿದೆ ಎಂದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಗೌರವಾನ್ವಿತ ವ್ಯವಸ್ಥಾಪನಾ ಮಂಡಳಿ ಸದಸ್ಯರು ಹಾಜರಿದ್ದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಕೆ.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ರಾಜ್ಯಪಶಸ್ತಿ ಪುರಸ್ಕೃತ ಕೃಷಿಕ ಹೆಚ್.ವಿ. ಸಜ್ಜನ್. ವಿಶ್ರಾಂತ ಪ್ರಾಚಾರ್ಯ ಕೆ. ಗುಣಪಾಲ್ ಕಡಂಬ, ಪ್ರಗತಿಪರ ಕೃಷಿಕ ಕೆ.ಆರ್. ಕೇಶವ, ಡಾ.ಬಿ. ಹೇಮ್ಲಾ ನಾಯಕ್ ಮೊದಲಾದವರಿದ್ದರು. 36 ವಿಭಾಗಗಳಿಂದ ವಸ್ತು ಪ್ರದರ್ಶನ, ಕೃಷಿ ತಾಕುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೇಷ್ಠ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೃಷಿ ಮಳಿಗೆಗಳು : ಕೃಷಿ ಮೇಳದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಕೃಷಿ, ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರಗಳು, ಪಶುಸಂಗೋಪನೆ, ಕಾನೂ ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 36 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರೈತರ, ಸಾರ್ವಜನಿಕರ ಗಮನ ಸೆಳೆಯುತ್ತಿವೆ.







