ಇಂದು ದೇಶೀಯ ಚಿಂತಕರ ಅಗತ್ಯವಿದೆ: ಡಾ.ಶೇಷ ಶಾಸ್ತ್ರಿ
ಸೇಡಿಯಾಪು, ಕಡಂಗೋಡ್ಲು ಪ್ರಶಸ್ತಿ ಪ್ರದಾನ
![ಇಂದು ದೇಶೀಯ ಚಿಂತಕರ ಅಗತ್ಯವಿದೆ: ಡಾ.ಶೇಷ ಶಾಸ್ತ್ರಿ ಇಂದು ದೇಶೀಯ ಚಿಂತಕರ ಅಗತ್ಯವಿದೆ: ಡಾ.ಶೇಷ ಶಾಸ್ತ್ರಿ](https://www.varthabharati.in/sites/default/files/images/articles/2021/11/13/313677-1636816409.jpg)
ಉಡುಪಿ, ನ.13: ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾಶಾಸ್ತ್ರ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ ಸೇಡಿಯಾಪು ಕೃಷ್ಣ ಭಟ್ಟರಂಥ ದೇಶೀಯ ಚಿಂತಕರ ಅಗತ್ಯ ಇಂದು ತುಂಬಾ ಇದೆ ಎಂದು ಖ್ಯಾತ ವಿದ್ವಾಂಸ ಹಾಗೂ ಅನಂತಪುರದ ಶ್ರೀಕೃಷ್ಣದೇವರಾಯ ವಿವಿಯ ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಆರ್.ಶೇಷ ಶಾಸ್ತ್ರಿ ಹೇಳಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ 2021ನೇ ಸಾಲಿನ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಇವರೊಂದಿಗೆ 2020ನೇ ಸಾಲಿನ ಸೇಡಿಯಾಪು ಪ್ರಶಸ್ತಿಯನ್ನು ಕಾಸರಗೋಡಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಹಾಗೂ ವಿದ್ವಾಂಸ ಡಾ.ಪಿ.ಶ್ರೀಕೃಷ್ಣ ಭಟ್ ಅವರು ಸ್ವೀಕರಿಸಿದರು. ಸೇಡಿಯಾಪು ಅವರ ಚಿಂತನೆ ಆಳ, ವಿಸ್ತಾರ, ವ್ಯಾಪಕ ಅಧ್ಯಯನಗಳನ್ನು ಒಳಗೊಂಡಿತ್ತು ಎಂದರು.
ಇದರೊಂದಿಗೆ 2021ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜೀವವಿಮಾ ನಿಗಮದ ಆಡಳಿತಾಧಿಕಾರಿಯಾಗಿರುವ ಡಿ.ಎಸ್.ರಾಮಸ್ವಾಮಿ ತಮ್ಮ ‘ಮೀನು ಬೇಟೆಗೆ ನಿಂತ ದೋಣಿ ಸಾಲು’ ಕೃತಿಗೆ ಸ್ವೀಕರಿಸಿದರು.
ಪ್ರಶಸ್ತಿ ವಿಜೇತ ಕೃತಿಯನ್ನು ಬಿಡುಗಡೆಗೊಳಿಸಿದ ಖ್ಯಾತ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯಾಯ ಹಿರಿಯಡಕ ಅವರು, ಕೃತಿ ಹಾಗೂ ಕೃತಿಕಾರರನ್ನು ಅಭಿನಂದಿಸಿ ಮಾತನಾಡಿದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕರಬ ಅವರು ಸೇಡಿಯಾಪು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ರಾಗಿರುವ ಡಾ.ಜಿ.ಎಲ್.ಹೆಗಡೆ ಅವರು ‘ಡಾ.ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಕನ್ನಡ ಸಾಹಿತ್ಯ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ಎಸ್.ನಾಯ್ಕ್ ಅವರು ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಡಾ.ಸೇಡಿಯಾಪು ಜಯರಾಮ ಭಟ್ ಅವರು ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ಟ ಪ್ರಾಸ್ತಾವಿಕ ಮಾತುಗಳೊಂದಿಗೆ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿನಿ ದೀಪಿಕಾ ವಂದಿಸಿದರೆ, ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.