ಕೇಂದ್ರದಲ್ಲಿ ಈಗ ‘ಮಾರಾಟಗಾರ’ ಸರಕಾರವಿದೆ: ಅಖಿಲೇಶ್ ಯಾದವ್ ಆಕ್ರೋಶ

ಗೋರಖ್ಪುರ: ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಇತ್ತೀಚಿನ ಮಾರಾಟ ಹಾಗೂ ವಿವಿಧ ಸಾರ್ವಜನಿಕ ವಲಯದ ಘಟಕಗಳಿಂದ ಹೂಡಿಕೆ ಹಿಂತೆಗೆದುಕೊಳ್ಳುವಿಕೆಯ ಮಾತುಕತೆಗಳನ್ನು ಉಲ್ಲೇಖಿಸಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರವನ್ನು "ಬೆಚು" (ಮಾರಾಟಗಾರ)ಸರಕಾರ ಎಂದು ಕರೆದಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆಯಾದ ಗೋರಖ್ಪುರದಲ್ಲಿ ಶನಿವಾರ ನಡೆದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಯಾದವ್, "ಈ ಸರಕಾರವು ಈಗ ಎಲ್ಲವನ್ನೂ ಮಾರುತ್ತಿದೆ. ಈ ಹಿಂದೆ "ಫೇಕು" ಸರಕಾರವಾಗಿದ್ದಾಗ ಎಲ್ಲವೂ ಸರಿಯಾಗಿತ್ತು, ಆದರೆ ಈಗ "ಬೆಚು" ಸರಕಾರವಿದೆ. ಎಲ್ಲಾ ಸರಕಾರಿ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ" ಎಂದು ಎಸ್ಪಿಯ ಚುನಾವಣಾ ಪ್ರಚಾರವಾಗಿ ಆರಂಭಿಸಿದ 'ವಿಜಯ್ ರಥ ಯಾತ್ರೆ'ಯಲ್ಲಿ ಹೇಳಿದರು.
ದೇಶದ ವಿವಿಧ ತೈಲ ಕಂಪನಿಗಳು ಇಂಧನ ಮಾರಾಟದಲ್ಲಿ 600 ಪ್ರತಿಶತದಷ್ಟು ಲಾಭವನ್ನು ಗಳಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸಿದರು ಹಾಗೂ ಬಿಜೆಪಿಗೆ ಲೆಕ್ಕ ಕೇಳಿದರು.
ಸರಕಾರವು "ಬಡವರ ಜೇಬುಗಳಿಗೆ ಕತ್ತರಿಹಾಕಿ" ಹಾಗೂ "ಶ್ರೀಮಂತರ ಬೊಕ್ಕಸವನ್ನು ತುಂಬುತ್ತಿದೆ" ಎಂದು ಆರೋಪ ಹೊರಿಸಿದರು.
ಮುಂಬರುವ ಚುನಾವಣೆಯ ನಂತರ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಸರಕಾರ ರಚಿಸಿದರೆ ಅದು ಪ್ರಸ್ತುತ ಸರಕಾರದ ಎಲ್ಲಾ ಅತಿರೇಕಗಳನ್ನು ಕೊನೆಗೊಳಿಸುತ್ತದೆ ಹಾಗು ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಕಾಳಜಿ ವಹಿಸುತ್ತದೆ ಎಂದು ಯಾದವ್ ಪ್ರತಿಪಾದಿಸಿದರು.







