ಚಳವಳಿಗಳಲ್ಲಿ ದಣಿವು, ಹತಾಶೆ, ಸಿನಿಕತನ ಎದ್ದು ಕಾಣುತ್ತಿದೆ: ದಿನೇಶ್ ಅಮೀನ್ ಮಟ್ಟು
ಪ್ರೊ.ಸಬೀಹಾ ಭೂಮಿಗೌಡ ಅಭಿನಂದನಾ ಕಾರ್ಯಕ್ರಮ
![ಚಳವಳಿಗಳಲ್ಲಿ ದಣಿವು, ಹತಾಶೆ, ಸಿನಿಕತನ ಎದ್ದು ಕಾಣುತ್ತಿದೆ: ದಿನೇಶ್ ಅಮೀನ್ ಮಟ್ಟು ಚಳವಳಿಗಳಲ್ಲಿ ದಣಿವು, ಹತಾಶೆ, ಸಿನಿಕತನ ಎದ್ದು ಕಾಣುತ್ತಿದೆ: ದಿನೇಶ್ ಅಮೀನ್ ಮಟ್ಟು](https://www.varthabharati.in/sites/default/files/images/articles/2021/11/14/313753-1636888422.gif)
ಮಂಗಳೂರು,ನ.14: ಒಂದು ಕಾಲದ ಚಳವಳಿಗಳಲ್ಲಿ ಅದರದ್ದೇ ಆದ ಕಿಚ್ಚು ಇತ್ತು. ಆದರೆ ಇತ್ತೀಚಿನ ಚಳವಳಿಗಳಲ್ಲಿ ದಣಿವು, ಹತಾಶೆ, ಸಿನಿಕತನ ಎದ್ದು ಕಾಣುತ್ತಿದೆ ಎಂದು ಹಿರಿಯ ಪತ್ರಕರ್ತ, ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ.
ಕರಾವಳಿ ಲೇಖಕಿಯರ -ವಾಚಕಿಯರ ಸಂಘ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಕವಿ ಪ್ರಕಾಶನ ಕವಲಕ್ಕಿ ಇದರ ಸಹಯೋಗದಲ್ಲಿ ವಿಜಯಪುರದ ಕರಾಮವಿವಿ ಇದರ ವಿಶ್ರಾಂತ ಕುಲಪತಿ ಪ್ರೊ.ಸಬೀಹಾ ಭೂಮಿಗೌಡರಿಗೆ ನಗರದ ಬಜ್ಜೋಡಿಯ ಶಾಂತಿಕಿರಣದಲ್ಲಿ ರವಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣಗೈದರು.
80ರ ದಶಕದಲ್ಲಿ ನಡೆಯುತ್ತಿದ್ದ ಚಳವಳಿಯನ್ನು ಸುವರ್ಣಯುಗ ಎನ್ನಬಹುದು. ರೈತರ, ದಲಿತರ, ಭಾಷಾ ಚಳವಳಿಗಳಲ್ಲಿ ನಾಡಿನ ಖ್ಯಾತ ಸಾಹಿತಿಗಳು, ವಿಶ್ವವಿದ್ಯಾನಿಲಯಗಳ ಪ್ರೊಫೆಸರ್ಗಳು ಭಾಗವಹಿಸುತ್ತಿದ್ದರು. ಆದರೆ ಈಗ ಕಾಲಚಕ್ರ ಉರುಳುವ ಬದಲು ಹಿಂದಕ್ಕೆ ಚಲಿಸುತ್ತಿದೆಯೋ ಎಂದು ಭಾಸವಾಗುತ್ತಿದೆ. ಈಗಿನ ಚಳವಳಿಗಳಲ್ಲಿ ದಣಿವು ಕಾಣುತ್ತಿದೆ. ಕಾಲೇಜು, ವಿವಿಗಳ ಪ್ರಾಧ್ಯಾಪಕರು ಚಳವಳಿಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಆದರೆ ಪ್ರೊ. ಸಬೀಹಾ ಭೂಮಿಗೌಡ ಅದಕ್ಕೆ ಅಪವಾದವಾಗಿದ್ದಾರೆ. ಅವರು ಕುಲಪತಿ ಆಗುವ ಮುನ್ನ ಹೇಗಿದ್ದರೋ, ಕುಲಪತಿ ಆದ ಬಳಿಕ ಮತ್ತು ನಿವೃತ್ತಿಯ ಬಳಿಕವೂ ಹಾಗೇ ಇದ್ದಾರೆ. ಅವರ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅನೇಕ ಹೋರಾಟಗಳಲ್ಲಿ ಅವರು ಭಾಗಿಯಾಗಿದ್ದರು. ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.
ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುತ್ತಿದ್ದ ಅವರು ಮುಂದೆಯೂ ಚಳವಳಿಗಳಲ್ಲಿ ಸಕ್ರಿಯರಾಗಬೇಕು. ಅಕಾಡಮಿಕ್ ವಲಯಗಳ ಅನುಭವಗಳನ್ನು ಧಾರೆ ಎರೆಯಬೇಕು ಎಂದ ಅಮೀನ್ ಮಟ್ಟು, ಖಾಸಗೀಕರಣದಿಂದ ಮಹಿಳೆಯರು ಸಂತಸ್ತರಾಗುತ್ತಿದ್ದಾರೆ. ಹಾಗಾಗಿ ಖಾಸಗೀಕರಣದ ವಿರುದ್ಧದ ಹೋರಾಟವು ಮಹಿಳಾಪರ ಹೋರಾಟವಾಗಿ ರೂಪುಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
'ಒಡನಾಡಿ ಸಬಿಹಾ' ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಪುಣೆಯ ಸಿಂಬಯಾಸಿಸ್ ಲಾ ಸ್ಕೂಲ್ನ ನಿರ್ದೇಶಕಿ ಡಾ.ಶಶಿಕಲಾ ಗುರುಪುರ, ಸಬೀಹಾ ಒಬ್ಬ ಸಾಧಾರಣ ಮಹಿಳೆ ಅಲ್ಲ. ಅಪಾರ ಧೈರ್ಯಸ್ಥೆ. ಸಾಹಸಿ. ತನ್ನದೇ ಆದ ಚಿಂತನಾ ಕ್ರಮದ ಮೂಲಕ ಸಮಾಜ ಕಟ್ಟುವ ಸಂಕಲ್ಪದ ಮೂಲಕ ಅವರು ನಮಗೆ ಮಾದರಿಯಾಗಿದ್ದಾರೆ ಎಂದರು.
ಹಿರಿಯ ಲೇಖಕಿ ಎ.ಪಿ.ಮಾಲತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಂಗಳೂರಿನ ಗಾಂಧಿ ಭವನದ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಮೈಸೂರಿನ ನ್ಯಾಯವಾದಿ ಎಂ.ಎನ್.ಸುಮನಾ, ಅಭಿನಂದನಾ ಗ್ರಂಥ ಸಂಪಾದಕ ಮಂಡಳಿಯ ಡಾ.ದು. ಸರಸ್ವತಿ ಉಪಸ್ಥಿತರಿದ್ದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ ವೀಡಿಯೋ ಮೂಲಕ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಸಬೀಹಾ ಭೂಮಿಗೌಡ ಮತ್ತವರ ಪತಿ ಪ್ರೊ.ಭೂಮಿಗೌಡರನ್ನು ಸನ್ಮಾನಿಸಲಾಯಿತು. ಕರಾವಳಿ ಲೇಖಕಿಯರು -ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳಾರು ಸ್ವಾಗತಿಸಿದರು. ಕವಿ ಪ್ರಕಾಶನದ ಡಾ.ಎಚ್.ಎಸ್.ಅನುಪಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.