ಗುರುಪುರ: ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ
![ಗುರುಪುರ: ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ ಗುರುಪುರ: ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ](https://www.varthabharati.in/sites/default/files/images/articles/2021/11/14/313754-1636888509.jpg)
ಮಂಗಳೂರು, ನ.14: ‘ಸಾಮಾನ್ಯರಲ್ಲಿ ಅತಿ ಸಾಮಾನ್ಯ ವ್ಯಕ್ತಿಯಾಗಿರುವ ನಾನು ಈ ದೇಶದ ಅತ್ಯುನ್ನತ ಪ್ರಶಸ್ತಿ ಕನಸು ಕಂಡವನಲ್ಲ. ಎಲ್ಲ ಮಕ್ಕಳು ಸುಶಿಕ್ಷಿತರಾಗಬೇಕೆನ್ನುವ ನನ್ನ ಮನದಾಳದ ತುಡಿತವೇ ನನ್ನನ್ನು ‘ಪದ್ಮಶ್ರೀ’ಯತ್ತ ಕೊಂಡೊಯ್ದಿದೆ. ಶಿಕ್ಷಣ ರಂಗದಲ್ಲಿ ನಾನು ಕಂಡ ಕನಸು ಹಂತಹಂತವಾಗಿ ಸಾಕಾರಗೊಂಡಿದೆ. ಈವರೆಗೆ ನನ್ನೊಂದಿಗೆ ಇದ್ದ ಕೊಡುಗೈ ದಾನಿಗಳು, ಅಧಿಕಾರಿಗಳು, ಮಾಧ್ಯಮ ಮಿತ್ರರು ಮುಂದೆಯೂ ಇರುತ್ತಾರೆ ಮತ್ತು ನಾ ಕಂಡ ಕಾಲೇಜು ಕನಸು ನನಸಾಗಿಸಲು ಅವರೆಲ್ಲ ಸಹಕರಿಸಲಿದ್ದಾರೆ ಎಂದು ‘ಪದ್ಮಶ್ರೀ’ ಹರೇಕಳ ಹಾಜಬ್ಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಂದಾವರ-ಆದ್ಯಪಾಡಿ-ಕೊಳಂಬೆ ಗ್ರಾಮದ ನಾಗರಿಕರು ಗುರುಪುರ ಕೈಕಂಬ ಸಮೀಪದ ಕಂದಾವರ ಕಟ್ಟೆ ಎಂಬಲ್ಲಿನ ಖಾಸಗಿ ಸಭಾಗೃಹದಲ್ಲಿ ರವಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಿವೃತ್ತ ಉಪನ್ಯಾಸಕ ವಸಂತ ಕೆ. ಅಭಿನಂದನಾ ಭಾಷಣ ಮಾಡಿದರು. ಕಂದಾವರ ಗ್ರಾಪಂ ಅಧ್ಯಕ್ಷ ಉಮೇಶ್ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ವಿಶ್ವನಾಥ ಶೆಟ್ಟಿ, ಮಂಗಳೂರು ಉತ್ತರ ಮಂಡಲ ಬಿಜೆಪಿ ಉಪಾಧ್ಯಕ್ಷೆ ಅಮೃತಲಾಲ್ ಡಿಸೋಜ, ಉತ್ತರ ಮಂಡಲ ಕಾರ್ಯದರ್ಶಿ ಶೋಧನ್ ಆದ್ಯಪಾಡಿ ಉಪಸ್ಥಿತರಿದ್ದರು.
ಸತೀಶ್ ಶೆಟ್ಟಿ ಕಂದಾವರ ಸ್ವಾಗತಿಸಿದರು. ಬಿಜೆಪಿ ಕೊಳಂಬೆ ಶಕ್ತಿ ಕೇಂದ್ರದ ಅಧ್ಯಕ್ಷ ಸುಕೇಶ್ ಮಾಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.