ಕೃಷಿ ಸಂಬಂಧಿತ ಜ್ಞಾನಭಿವೃದ್ಧಿಗಾಗಿ `ಕೃಷಿ ಮೇಳ' ಸಹಕಾರಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು, ನ. 14: `ನಮ್ಮ ದೇಶ ಕೃಷಿ ಆಧಾರಿತ ರಾಷ್ಟ್ರವಾಗಿದೆ. ಕೃಷಿ ಸಂಬಂಧಿತ ಜ್ಞಾನಭಿವೃದ್ಧಿಗಾಗಿ ಕೃಷಿ ಮೇಳ ಸಹಕಾರಿಯಾಗಲಿದ್ದು, ಮೇಳ ಆಯೋಜನೆಯಿಂದಾಗಿ ಸಾವಿರಾರು ರೈತರು ಮತ್ತು ನಾಗರಿಕರು ಅನೇಕ ಮಹತ್ವಪೂರ್ಣ ಮಾಹಿತಿಯೊಂದಿಗೆ, ಅನುಕೂಲ ಪಡೆಯಲಿದ್ದಾರೆ' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ರವಿವಾರ ಇಲ್ಲಿನ ಜಿಕೆವಿಕೆ ಆವರಣದಲ್ಲಿ ಆಯೋಜಿಸಲಾಗಿದ್ದ ಭಾತಿಕ ಮತ್ತು ವರ್ಚುವಲ್ `ಕೃಷಿ ಮೇಳ-2021'ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಅವರು ಮೊದಲಿಗೆ ಕೃಷಿ ವಿಶ್ವ ವಿದ್ಯಾಲಯದ 10 ಹೊಸ ತಳಿಗಳ ಪ್ರಾತ್ಯಕ್ಷಿಕೆ ತಾಕುಗಳನ್ನು ವೀಕ್ಷಿಸಿದರು. ಅನಂತರ ವೇದಿಕೆಯಲ್ಲಿ ಏಳು ಮಂದಿ ಕೃಷಿ ಸಾಧಕರಿಗೆ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲಿಗೆ ನೆರದಿದ್ದ ಸರ್ವರಿಗೂ ಕನ್ನಡದಲ್ಲಿ ಅಭಿನಂದನೆಗಳನ್ನು ಸಲ್ಲಿಸಿ, ಕನ್ನಡ ಕಲಿಯುತ್ತಿರುವುದರ ಬಗ್ಗೆ ತಿಳಿಸಿದರು.
`ನಮ್ಮ ದೇಶದಲ್ಲಿ ಜಾತ್ರೆಗೆ ವಿಶೇಷ ಮಹತ್ವವಿದೆ. ಜಾತ್ರೆ ನಮ್ಮ ಹಳೆಯ ಸಂಪ್ರದಾಯ, ಧಾರ್ಮಿಕ, ಸಾಂಸ್ಕøತಿಕ, ಭೌಗೋಳಿಕ ಮಾಹಿತಿಯ ಜೊತೆಗೆ, ನಾವು ಪರಸ್ಪರ ಅರ್ಥಮಾಡಿಕೊಳ್ಳುವ ಮತ್ತು ಉತ್ತಮ ಬಾಂಧವ್ಯದ ಪ್ರಯೋಜನ ಪಡೆಯುತ್ತೇವೆ. ಕೃಷಿ ಮೇಳದಲ್ಲಿ ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಿ, ಆಧುನಿಕ ತಂತ್ರಜ್ಞಾನ ಸೇರಿದಂತೆ ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಮತ್ತು ಲಾಭದಾಯಕ ಸಮಗ್ರ ಕೃಷಿ ಪದ್ಧತಿ ಬಗ್ಗೆ ಮಾಹಿತಿ ದೊರೆಯಲಿದೆ. ಈ ಮೇಳಗಳು ಆದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ಬಾಲ್ಯದಲ್ಲಿ ಪೋಷಕರು ನಮ್ಮ ಕೈಹಿಡಿದು ಮೇಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು, ಹಬ್ಬದ ಮಾದರಿಯಲ್ಲಿ ನಾವು ಸಂಭ್ರಮಿಸುತ್ತಿದ್ದೆವು' ಎಂದು ಅವರು ಸ್ಮರಿಸಿದರು.
`ಕೃಷಿ ಮೇಳವು ಇತ್ತೀಚಿನ ಅಭಿವೃದ್ಧಿ ಹೊಂದಿದ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ಕೃಷಿ ವಲಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ರೈತ ಸಮುದಾಯ ಮತ್ತು ಸಂಬಂಧಿತ ವಲಯಗಳಲ್ಲಿ ಜಾಗೃತಿ ಮೂಡಿಸಲು ಒಂದು ಅನನ್ಯ ಕಾರ್ಯಕ್ರಮವಾಗಿದೆ. ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಆಯೋಜಿಸಿರುವ ಈ ಮೇಳ ಕೃಷಿ, ಕೃಷಿ ಯಂತ್ರೋಪಕರಣಗಳು, ಸಾವಯವ ಕೃಷಿ, ಹೂಡಿಕೆ ಏಜೆನ್ಸಿಗಳು, ಪಶುಸಂಗೋಪನೆ, ಸುಗ್ಗಿಯ ನಂತರದ ತಂತ್ರಜ್ಞಾನ, ಸ್ವಸಹಾಯ ಗುಂಪುಗಳು, ಕೃಷಿ ಸ್ಟಾರ್ಟಪ್ಗಳು ಮತ್ತು ನೇರ ಬೆಳೆ ಪ್ರಾತ್ಯಕ್ಷಿಕೆಗಳು ಇತ್ಯಾದಿಗಳನ್ನು ಕೇಂದ್ರೀಕರಿಸಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಸೇರಿದಂತೆ ಅನೇಕ ಕೃಷಿ ಸಂಬಂಧಿತ ಮಾಹಿತಿಗಳು ಹಾಗೂ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಯೋಜನಗೆಳ ಮಾಹಿತಿಯನ್ನು ಒದಗಿಸಲಾಗಿದೆ' ಎಂದು ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
`57 ವರ್ಷಗಳಲ್ಲಿ ವಿಶ್ವ ವಿದ್ಯಾಲಯವು 200 ಕ್ಕೂ ಹೆಚ್ಚು ಪ್ರಭೇದಗಳನ್ನು ಮತ್ತು 334 ಇತರ ಕೃಷಿ ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಿದೆ. ಕೃಷಿ ವಿಸ್ತರಣೆಗೆ ಸಂಬಂಧಿಸಿದಂತೆ, ವಿಶ್ವ ವಿದ್ಯಾಲಯವು ವೇಗವನ್ನು ಹೊಂದಿಸುವ ಮತ್ತು ತರಬೇತುದಾರರಾಗಿ ಪ್ರಮುಖ ಪಾತ್ರವನ್ನು ವಹಿಸಿದೆ. ವಿಶ್ವ ವಿದ್ಯಾಲಯವು ಅಭಿವೃದ್ಧಿಪಡಿಸಿದ ವಿಸ್ತರಣಾ ಮಾದರಿಯನ್ನು ದೇಶಾದ್ಯಂತ ಅಳವಡಿಸಲಾಗಿದೆ. ಈ ವಿಶ್ವವಿದ್ಯಾನಿಲಯದ ಪ್ರತಿಯೊಂದು ಕೃಷಿ ವಿಜ್ಞಾನ ಕೇಂದ್ರವು ತಲಾ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಜಿಲ್ಲಾ ಮಟ್ಟದಲ್ಲಿ ಮಾದರಿ ಗ್ರಾಮವನ್ನಾಗಿ ಮಾರ್ಪಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
`ಭಾರತದಲ್ಲಿ ಹಸಿರು ಕ್ರಾಂತಿಯು ಆಹಾರ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಿತು ಮತ್ತು ಹಸಿರು ಕ್ರಾಂತಿಯಿಂದಾಗಿ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳಿಗೆ ಸಮನಾಗಿ ನಿಂತಿದೆ. ಹಸಿರು ಕ್ರಾಂತಿಯು ದೇಶವನ್ನು ಆಹಾರದ ಬಿಕ್ಕಟ್ಟಿನಿಂದ ಹೊರತರುವುದಲ್ಲದೆ, ಆರ್ಥಿಕವಾಗಿ ತನ್ನ ಕಾಲಿನ ಮೇಲೆ ನಿಲ್ಲುವ ಮೂಲಕ ಇಡೀ ಜಗತ್ತನ್ನು ಮುನ್ನಡೆಸುವ ಹಾದಿಯನ್ನು ಸುಗಮಗೊಳಿಸಿದೆ. ಭಾರತೀಯ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಉತ್ತಮ ಕೃಷಿ ಪದ್ಧತಿ ಅಗತ್ಯವಿದೆ. ನ್ಯಾನೊ ತಂತ್ರಜ್ಞಾನ, ಕೃಷಿಯಲ್ಲಿ ಡ್ರೋನ್ಗಳ ಬಳಕೆ, ನೀರಾವರಿಯಲ್ಲಿ ಯಾಂತ್ರೀಕರಣ, ಕೃಷಿ ಯಾಂತ್ರೀಕರಣ, ನೈಸರ್ಗಿಕ ಮತ್ತು ಸಾವಯವ ಕೃಷಿ, ಸಂಪನ್ಮೂಲ ಬಳಕೆ ದಕ್ಷತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳು, ರೈತ ಸ್ನೇಹಿ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸುವ ಮತ್ತು ಹೊಸ ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸುವುದು ಅಗತ್ಯವಿದೆ' ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.
`ಕರ್ನಾಟಕವನ್ನು ದೇಶದಲ್ಲಿಯೇ ಸಮೃದ್ಧ ಕೃಷಿ ರಾಜ್ಯವನ್ನಾಗಿ ಮಾಡಲು ಅವರ ನಿರಂತರ ಮತ್ತು ಕಠಿಣ ಪ್ರಯತ್ನಗಳಿಗಾಗಿ ವಿಜ್ಞಾನಿಗಳು, ವಿಸ್ತರಣಾ ಕಾರ್ಯಕರ್ತರು ಮತ್ತು ಶ್ರಮಿಸುತ್ತಿರುವ ರೈತ ಸಮುದಾಯವನ್ನು ಹಾಗೂ ಈ ಸಮಾರಂಭದಲ್ಲಿ ಪುರಸ್ಕರಿಸಲ್ಪಟ್ಟ ರೈತರಿಗೆ ನನ್ನ ಅಭಿನಂದನೆಗಳು ಎಂದು ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು. ಕುಲಪತಿ ಡಾ. ರಾಜೇಂದ್ರ ಪ್ರಸಾದ್, ಕುಲಸಚಿವ ಡಾ.ಬಸವೇಗೌಡ, ವಿಸ್ತರಣಾ ನಿರ್ದೇಶಕ ಡಾ.ಎನ್.ದೇವಕುಮಾರ್, ಸಂಶೋಧನಾ ನಿರ್ದೇಶಕ ಡಾ.ಷಡಾಕ್ಷರಿ, ವ್ಯವಸ್ಥಾಪನಾ ಮಂಡಳಿ ಸದಸ್ಯ ರಾಮಾಂಜಿನಿ ಗೌಡ, ಅರವಿಂದ್, ಶ್ರೀರಾಮ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.







