ಕ್ರಮಬದ್ಧ ಜೀವನಶೈಲಿಯಿಂದ ಕಾಯಿಲೆಗಳು ದೂರ: ಸುನೀಲ್ ಕುಮಾರ್
![ಕ್ರಮಬದ್ಧ ಜೀವನಶೈಲಿಯಿಂದ ಕಾಯಿಲೆಗಳು ದೂರ: ಸುನೀಲ್ ಕುಮಾರ್ ಕ್ರಮಬದ್ಧ ಜೀವನಶೈಲಿಯಿಂದ ಕಾಯಿಲೆಗಳು ದೂರ: ಸುನೀಲ್ ಕುಮಾರ್](https://www.varthabharati.in/sites/default/files/images/articles/2021/11/14/313776-1636900871.jpg)
ಉಡುಪಿ, ನ. 14: ನಮ್ಮ ಆಹಾರ, ಜೀವನ ಶೈಲಿ ಕ್ರಮಬದ್ಧವಾಗಿದ್ದರೆ ಮಾತ್ರ ಕಾಯಿಲೆಗಳನ್ನು ದೂರ ಇಡಲು ಸಾಧ್ಯವಾಗುತ್ತದೆ. ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದೆ ಶಿಸ್ತಿನ ಜೀವನ ಶೈಲಿಯೊಂದಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿ ಆದರ್ಶ ಆಸ್ಪತ್ರೆ ಮತ್ತು ಆದರ್ಶ ಚಾರಿಟೇಬಲ್ ಟ್ರಸ್ಟ್ ಆಶ್ರಯ ದಲ್ಲಿ ವಿಶ್ವ ಡಯಾಬಿಟೀಸ್ ದಿನಾಚರಣೆ ಪ್ರಯುಕ್ತ ಆಸ್ಪತ್ರೆಯಲ್ಲಿ ರವಿವಾರ ಆಯೋಜಿಸಲಾದ ಉಡುಪಿ ತಾಲೂಕಿನ ಗ್ರಾಪಂ ಸದಸ್ಯರು, ಸಿಬಂದಿ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಜಿಲ್ಲೆಯ ಗ್ರಾಪಂ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಡ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಶಾಸಕ ಕೆ. ರಘುಪತಿ ಭಟ್ಮಾತನಾಡಿದರು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಹಿರಿಯ ನರರೋಗ ತಜ್ಞ ಡಾ.ಎ.ರಾಜಾ ಉಪಸ್ಥಿತರಿದ್ದರು.
ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆಸ್ಪತ್ರೆ ಮ್ಯಾನೇಜರ್ ಡಿಯಾಗೊ ಕ್ವಾಡ್ರಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಟಿ. ವಂದಿಸಿದರು.
ಕೋವಿಡ್ ಬಳಿಕ ಮಧುಮೇಹ ಹೆಚ್ಚಳ
ಈವರೆಗೆ ಭಾರತದಲ್ಲಿ 140 ಲಕ್ಷ ಮಂದಿ ಡಯಾಬಿಟೀಸ್ಗೆ ತುತ್ತಾಗಿದ್ದಾರೆ. ಕೋವಿಡ್ ಬಳಿಕ ಶೇ.5ರಿಂದ ಶೇ.8ರಷ್ಟು ಡಯಾಬಿಟೀಸ್ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕೆ ಪ್ಯಾಂಕ್ರಿಯಾಸ್ ಸೆಲ್ಗಳಿಗೆ ಕೋವಿಡ್ ವೈರಸ್ ಹಾನಿ ಮಾಡಿರುವುದೇ ಕಾರಣ ಎಂದು ಡಾ.ಜಿ.ಎಸ್.ಚಂದ್ರಶೇಖರ್ ತಿಳಿಸಿದರು.
ಸರಿಯಾದ ದೇಹ ತೂಕ ಹೊಂದದೆ ಇರುವುದು ಡಯಾಬಿಟೀಸ್ಗೆ ಪ್ರಮುಖ ಕಾರಣವಾಗಿದೆ. ದೈನಂದಿನ ಚಟುವಟಿಕೆ, ಉತ್ತಮ ಆಹಾರ ಸೇವನೆ, ವ್ಯಯಾಮದಿಂದ ಡಯಾಬಿಟೀಸ್ ದೂರ ಇಡಬುದಾಗಿದೆ ಎಂದು ಅವರು ಹೇಳಿದರು.