ದಂತವೈದ್ಯಕೀಯ ಶಿಕ್ಷಣ ಮುಂದುವರಿಸಲು ಹೈಕೋರ್ಟ್ ಅಸ್ತು; ಮಂಗಳೂರು ವಿದ್ಯಾರ್ಥಿನಿ ನಿಧಿ ಶೆಟ್ಟಿಗಾರ್ ಪರ ತೀರ್ಪು

ಮಂಗಳೂರು, ನ.15: ಇಂಜಿನಿಯರಿಂಗ್ ಕೋರ್ಸ್ ಬದಲು ದಂತವೈದ್ಯಕೀಯ ಕೋರ್ಸ್ ಸೇರಿದ್ದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಆದೇಶವನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ವಿದ್ಯಾರ್ಥಿನಿ ದಂತ ವೈದ್ಯಕೀಯ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ ಮಾತ್ರವಲ್ಲ ಅದೇ ಕೋರ್ಸ್ ಮುಂದುವರಿಸಲು ಅವಕಾಶ ಕಲ್ಪಿಸಿ ಮಹತ್ವದ ತೀರ್ಪು ನೀಡಿದೆ.
ಮಂಗಳೂರಿನ ಶ್ರೀನಿವಾಸ ಡೆಂಟಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ನಿಧಿ ಶೆಟ್ಟಿಗಾರ್ ರಿಗೆ ಹೈಕೋರ್ಟ್ ನ್ಯಾಯ ಒದಗಿಸಿಕೊಟ್ಟಿದೆ.
ನಿಧಿ ಅವರು ದ್ವಿತೀಯ ಪಿಯುಸಿ ಬಳಿಕ ಸಿಇಟಿ ಪರೀಕ್ಷೆಗೆ ಬರೆದು ಇಂಜಿನಿಯರ್ ಕೋರ್ಸ್ಗಾಗಿ ಹೆಸರು ನೋಂದಾಯಿಸಿದ್ದರು. ಮಾತ್ರವಲ್ಲ ಸಿಇಟಿಯಲ್ಲಿ ಇಂಜಿನಿಯರಿಂಗ್ ಕೋರ್ಸ್ಗೆ ಅರ್ಹತೆ ಗಳಿಸಿದ್ದರು. ಬಳಿಕ ಮನಸ್ಸು ಬದಲಿಸಿ ದಂತ ವೈದ್ಯಕೀಯ ಮಾಡಲು ತೀರ್ಮಾನಿಸಿ ನೀಟ್ ಪರೀಕ್ಷೆ ಬರೆದು, ನೀಟ್ ಕೌನ್ಸಿಲಿಂಗ್ನಲ್ಲಿ ಅರ್ಹತೆ ಪಡೆಯುತ್ತಾರೆ. ಅದರಂತೆ ಮಂಗಳೂರಿನ ಶ್ರೀನಿವಾಸ ದಂತ ವೈದ್ಯಕೀಯ ಕಾಲೇಜಿನಲ್ಲಿ ಹೆಸರು ನೋಂದಾಯಿಸಿ ತರಗತಿಗೆ ಹಾಜರಾಗುತ್ತಾರೆ. ಈ ಮಧ್ಯೆ ಪರೀಕ್ಷೆ ಮೊದಲು ಇಂಜಿನಿಯರಿಂಗ್ನಲ್ಲಿ ಹೆಸರು ನೋಂದಾಯಿಸಿದ್ದೀರಿ ಅದರಲ್ಲೇ ಮುಂದುವರಿಯಬೇಕು, ದಂತ ವೈದ್ಯಕೀಯ ಪರೀಕ್ಷೆಗೆ ಹಾಲ್ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ರಾಜೀವ್ ಗಾಂಧಿ ವಿವಿ ಆಕೆಗೆ ಹಾಲ್ ಟಿಕೆಟ್ ನೀಡಲು ನಿರಾಕರಿಸಿತು.
ಇದರಿಂದ ಕಂಗಾಲಾದ ವಿದ್ಯಾರ್ಥಿನಿ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಅಲೋಕ್ ಅರಾದೆ ಮತ್ತು ನ್ಯಾಯಮೂರ್ತಿ ಅನಂತ್ ಹೆಗಡೆ ಅವರ ಪೀಠ ರಾಜೀವ್ ಗಾಂಧಿ ವಿವಿ ಮತ್ತು ಅರ್ಜಿದಾರರ ವಾದ ವಿವಾದವನ್ನು ಆಲಿಸಿ ಸೋಮವಾರ ಅರ್ಜಿದಾರರ ಪರ ತೀರ್ಪು ನೀಡಿದ್ದಾರೆ. ಅದರಂತೆ ಮಧ್ಯಂತರ ತೀರ್ಪು ನೀಡಿದ ನ್ಯಾಯಾಲಯ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.
ರಾಜೀವ್ ಗಾಂಧಿ ವಿವಿಯ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಇಂಜಿನಿಯರಿಂಗ್ಗೆ ಹೆಸರು ನೋಂದಾಯಿಸಿದ್ದರೂ ದಂತ ವೈದ್ಯಕೀಯಕ್ಕೆ ತಡೆ ನೀಡುವಂತಿಲ್ಲ. ವಿದ್ಯಾರ್ಥಿನಿಗೆ ದಂತ ವೈದ್ಯಕೀಯ ಶಿಕ್ಷಣ ಮುಂದುವರಿಸುವ ಎಲ್ಲಾ ಅರ್ಹತೆ ಇದೆ ಎಂದು ಹೇಳಿದ ನ್ಯಾಯಾಲಯ ನ.16ರಿಂದ ಆರಂಭಗೊಳ್ಳುವ ದಂತ ವೈದ್ಯಕೀಯ ಪರೀಕ್ಷೆಯನ್ನು ಅರ್ಜಿದಾರರು ಬರೆಯಬಹದು. ವಿದ್ಯಾವಿದ್ಯಾನಿಲಯ ಕೂಡ ಹಿಂದಿನ ಫಲಿತಾಂಶ ಪ್ರಕಟಿಸಬಹುದು ಎಂದು ತೀರ್ಪು ನೀಡಿದೆ.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ರವೀಂದ್ರ ಕಾಮತ್ ವಾದ ಮಂಡಿಸಿದ್ದರು.







