ಕೋ.ಮ. ಕಾರಂತ ಪ್ರಶಸ್ತಿಗೆ ಎ. ಗೋಪಾಲಕೃಷ್ಣ ಕೊಡ್ಗಿ ಆಯ್ಕೆ

ಎ.ಗೋಪಾಲಕೃಷ್ಣ ಕೊಡ್ಗಿ
ಕುಂದಾಪುರ, ನ.15: ಕುಂದಪ್ರಭ ಸಂಸ್ಥೆಯ ವತಿಯಿಂದ ಪ್ರದಾನ ಮಾಡಲಾಗುತ್ತಿರುವ ಕೋ.ಮ. ಕಾರಂತ ಪ್ರಶಸ್ತಿಗೆ ಹಿರಿಯ ಸಾಮಾಜಿಕ ಧುರೀಣ , ಮಾಜಿ ಶಾಸಕ, ಕರ್ನಾಟಕ 3ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ, ಎ.ಗೋಪಾಲಕೃಷ್ಣ ಕೊಡ್ಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದಲ್ಲಿ, ಸ್ವಾತಂತ್ರ್ಯ ಹೋರಾಟಗಾರ ಕೃಷ್ಣರಾಯ ಕೊಡ್ಗಿಯವರ ಪುತ್ರರೂ ಆಗಿರುವ ಎ.ಜಿ. ಕೊಡ್ಗಿ ಅವರನ್ನು ,ಕೋಣಿ ಶಿವಾನಂದ ಕಾರಂತ ನೇತ್ರತ್ವದ ಸಮಿತಿ ಆಯ್ಕೆ ಮಾಡಿದೆ.
ಖ್ಯಾತ ಪತ್ರಕರ್ತ, ಸಾಹಿತಿ, ವಾಗ್ಮಿ ಕುಂದಾಪುರದ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ಪ್ರತೀ ವರ್ಷ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಳೆದ ಆರು ದಶಕದಲ್ಲಿ ಎ.ಜಿ.ಕೊಡ್ಗಿಯವರು ಹಲವು ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 23ರಂದು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ತಿಳಿಸಿದ್ದಾರೆ.







