ಕಾರ್ಕಳೋತ್ಸವದ ಮೊದಲು ಸಚಿವರ ವೈಫಲ್ಯೋತ್ಸವ ಮಾಡುತ್ತೇವೆ: ಶುಭದರಾವ್
ಕಾರ್ಕಳ, ನ.22: ಕಾರ್ಕಳ ಶಾಸಕರೂ ರಾಜ್ಯದ ಸಚಿವರೂ ಆಗಿರುವ ಸುನೀಲ್ ಕುಮಾರ್ ಅವರು ಕಾರ್ಕಳ ಉತ್ಸವದ ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಲಿ. ಇಲ್ಲವಾದರೆ ನಾವು ಅವರ ವೈಫಲ್ಯಗಳ ಪಟ್ಟಿ ಮಾಡಿ 'ಸಚಿವರ ವೈಫಲ್ಯೋತ್ಸವ' ಮಾಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ಶುಭದ ರಾವ್ ಹೇಳಿದ್ದಾರೆ.
ಸಚಿವರು ಮೊದಲು ನಡೆಯಲೂ ಯೋಗ್ಯವಲ್ಲದ ಪೇಟೆಯ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಿ, ಸಿಂಗಲ್ ಲೇಔಟ್ ಸಮಸ್ಯೆಗೆ ತಿಂಗಳೊಳಗೆ ಪರಿಹಾರ ಎಂದು ಹೇಳಿ ತಿಂಗಳು ಎರಡಾಯಿತು. ಸಚಿವರಾದಾಗ ಪ್ರತೀ ಗ್ರಾಮಗಳಿಗೆ ತೆರಳಿ ಸನ್ಮಾನ ಸ್ವೀಕರಿಸಿ ಕೊಟ್ಟ ಭರವಸೆಗಳು ಕೇವಲ ಭಾಷಣಕ್ಕೆ ಸೀಮಿತವಾಯಿತು. ಸರಕಾರಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ನೌಕರರಿಲ್ಲದ ಕಾರಣ ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಕೆಲಸ ಮಾಡಿಕೊಳ್ಳಲಾಗದೆ ಸಂಕಷ್ಟ ಪಡುತ್ತಿದ್ದಾರೆ. ಕೊನೆಪಕ್ಷ ಒಬ್ಬ ತಹಶೀಲ್ದಾರರನ್ನು ನೇಮಿಸುವ ಕಾಳಜಿ ಸಚಿವರಿಗಿಲ್ಲ. ಇಂತಹ ಅನೇಕ ವೈಫಲ್ಯಗಳ ಸರಮಾಲೆ ಇದ್ದರೂ ಅದ್ಯಾವುದಕ್ಕೂ ಗಮನ ಕೊಡದೆ ಕೇವಲ ದೇಶ ಸುತ್ತುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಜನರ ಗೋಳು ಕೇಳುವವರಿಲ್ಲ, ಸಾರ್ವಜನಿಕರು, ಸಂಘಟನೆಗಳು, ರಾಜಕೀಯ ಪಕ್ಷಗಳು ಎಷ್ಟೇ ಪ್ರತಿಭಟನೆ ನಡೆಸಿದರೂ ಅವರ ನಿರ್ಲಕ್ಷ್ಯ ಕಾರ್ಕಳ ಜನತೆಗೆ ಮಾಡಿದ ಅಪಮಾನವಲ್ಲವೇ? ರಸ್ತೆ ದುರಸ್ತಿಯಾಗದೆ ಮುಖ್ಯಮಂತ್ರಿ ಬಂದರೂ ನಮ್ಮ ಪ್ರತಿಭಟನೆ ಶತಸಿದ್ಧ ಎಂದು ಶುಭದ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.