ಮಾಧ್ಯಮ ಅಕಾಡಮಿಯ ‘40ರ ಸಂಭ್ರಮ’ಕ್ಕೆ ಹಲವು ಯೋಜನೆ: ಸದಾಶಿವ ಶೆಣೈ
![ಮಾಧ್ಯಮ ಅಕಾಡಮಿಯ ‘40ರ ಸಂಭ್ರಮ’ಕ್ಕೆ ಹಲವು ಯೋಜನೆ: ಸದಾಶಿವ ಶೆಣೈ ಮಾಧ್ಯಮ ಅಕಾಡಮಿಯ ‘40ರ ಸಂಭ್ರಮ’ಕ್ಕೆ ಹಲವು ಯೋಜನೆ: ಸದಾಶಿವ ಶೆಣೈ](https://www.varthabharati.in/sites/default/files/images/articles/2021/11/22/314758-1637581251.jpg)
ಉಡುಪಿ, ನ.22: ಕರ್ನಾಟಕ ಮಾಧ್ಯಮ ಅಕಾಡೆಮಿಯ 40ರ ಸಂಭ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು, ಈ ಪ್ರಯುಕ್ತ 40 ಮಂದಿ ಹಿರಿಯ ಪತ್ರಕರ್ತರಿಗೆ ಸನ್ಮಾನ, 40 ಪುಸ್ತಕಗಳ ಬಿಡುಗಡೆ ಸೇರಿದಂತೆ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ತಿಳಿಸಿದ್ದಾರೆ.
ಉಡುಪಿ ಪತ್ರಿಕಾ ಭವನಕ್ಕೆ ಸೋಮವಾರ ಭೇಟಿ ನೀಡಿದ ಅವರು, ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪತ್ರಕರ್ತರಿಗೆ ಅನುಕೂಲವಾಗುವ ಯಾವುದೇ ಕಾರ್ಯಕ್ರಮ ಮಾಡಿದರೆ ಮಾಧ್ಯಮ ಅಕಾಡೆಮಿ ಕೈಜೋಡಿಸುತ್ತದೆ. ಜಿಲ್ಲೆಯ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪತ್ರಕರ್ತರು ಹಾಗೂ ಸರಕಾರದ ಕೊಂಡಿಯಾಗಿ ಕೆಲಸ ಮಾಡಲು ಪ್ರಯತ್ನ ಮಾಡಲಾಗು ವುದು ಎಂದರು.
ಈ ಹಿಂದಿನ ಎರಡು ವರ್ಷಗಳ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲು ಬಾಕಿ ಇದ್ದು, ಈ ವರ್ಷದ ಸೇರಿ ಒಟ್ಟು ಮೂರು ವರ್ಷಗಳ ಪ್ರಶಸ್ತಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪ್ರದಾನ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಕರ್ತರಿಗೆ ಆರೋಗ್ಯ ನಿಧಿ ಯೋಜನೆ ಜಾರಿಗೆ ತರುವಂತೆ ಬೆಂಗಳೂರು ಪ್ರೆಸ್ಕ್ಲಬ್ ವತಿಯಿಂದ ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ವಾರ್ತಾ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ. ಸರಕಾರ ಪತ್ರಕರ್ತರ ನೋವಿಗೆ ಸ್ಪಂದಿಸುತ್ತದೆ ಎಂಬುದು ನಮ್ಮ ಆಶಯವಾಗಿದೆ. ಸರಕಾರ ಈ ಯೋಜನೆ ಜಾರಿಗೆ ತಂದರೆ ಅದು ಇಡೀ ರಾಜ್ಯದ ಪತ್ರಕರ್ತರಿಗೆ ಅನ್ವಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.