ನೌಕಾ ಪಡೆಯ ಮಾಹಿತಿ ಸೋರಿಕೆ ಪ್ರಕರಣ: ಬಂಧಿತ ಅಧಿಕಾರಿ ಅಜಿತ್ ಕುಮಾರ್ ಪಾಂಡೆಗೆ ಜಾಮೀನು
ಹೊಸದಿಲ್ಲಿ, ನ. 22: ನೌಕಾ ಪಡೆಯ ಉಪಕರಣಗಳ ಖರೀದಿ ಹಾಗೂ ನಿರ್ವಹಣೆ ಕುರಿತ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ ಸಿಬಿಐಯಿಂದ ಬಂಧಿತರಾಗಿದ್ದ ನೌಕಾ ಪಡೆಯ ಕಮಾಂಡರ್ ಅಜಿತ್ ಕುಮಾರ್ ಪಾಂಡೆ ಅವರಿಗೆ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಅಧಿಕೃತ ರಹಸ್ಯ ಕಾಯ್ದೆ ಅಡಿಯಲ್ಲಿ ನಡೆಸುತ್ತಿರುವ ತನಿಖೆಗೆ ಸಂಬಂಧಿಸಿ ಸಿಬಿಐ ಅಜಿತ್ ಕುಮಾರ್ ಪಾಂಡೆ ಹಾಗೂ ಇತರರ ವಿರುದ್ಧ ಅಸಂಪೂರ್ಣ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಸೆಪ್ಟಂಬರ್ 3ರಂದು ಬಂಧಿತರಾಗಿದ್ದ ಪಾಂಡೆ ಅವರಿಗೆ ನ್ಯಾಯಾಲಯ ಜಾಮೀನು ನೀಡಿತು.
ನ್ಯಾಯಾಲಯದ ಮುಂದೆ ಸಲ್ಲಿಸಲಾದ ಆರೋಪ ಪಟ್ಟಿ ಅಪೂರ್ಣವಾಗಿದ್ದು, ಅಧಿಕೃತ ರಹಸ್ಯ ಕಾಯ್ದೆ (ಒಎಸ್ಒ)ಅಡಿಯಲ್ಲಿ ತನಿಖೆ ನಡೆಸುತ್ತಿರುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಆದರೆ, ಈ ಕಾಯ್ದೆ ಅಡಿಯಲ್ಲೇ ತನಿಖೆ ನಡೆಸಲಾಗುತ್ತಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅನುರಾಧಾ ಶುಕ್ಲಾ ಭಾರದ್ವಾಜ್ ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಇದೇ ಆಧಾರದಲ್ಲಿ ನ್ಯಾಯಾಲಯ ಈಗಾಗಲೇ ನೌಕಾ ಪಡೆಯ ನಿವೃತ್ತ ಅಧಿಕಾರಿ ರಣದೀಪ್ ಸಿಂಗ್ ಹಾಗೂ ಕಮಾಂಡರ್ ಸತ್ವಿಂದರ್ ಜೀತ್ ಸಿಂಗ್ ಅವರನ್ನು ಬಿಡುಗಡೆ ಮಾಡಿತ್ತು.