ಶಿವಮೊಗ್ಗ: ಮಕ್ಕಳ ಮೈ-ಕೈ ಮೇಲೆ ಬಾಸುಂಡೆ ಬರುವಂತೆ ಹೊಡೆದ ಪ್ರಾಂಶುಪಾಲ: ಆರೋಪ
ಅವ್ಯವಸ್ಥೆ ವಿರುದ್ಧ ಯಡೇಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳಿಂದ ಕಾಲ್ನಡಿಗೆ ಮೂಲಕ ಧರಣಿ ► ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯ

ಶಿವಮೊಗ್ಗ,ನ.,23: ಪ್ರಾಂಶುಪಾಲರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಬೆಳ್ಳಂಬೆಳಗ್ಗೆ ಪ್ರತಿಭಟನೆ ಆರಂಭಿಸಿದ್ದಾರೆ.
ಸಾಗರ ತಾಲೂಕು ಆನಂದಪುರದ ಯಡೇಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ಮಕ್ಕಳು ಇಂದು ಬೆಳಗಿನ ಉಪಹಾರ ತ್ಯಜಿಸಿ, ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನ್ಯಾಯ ಕೊಡಿಸುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ತರಗತಿಯಲ್ಲಿ ಮಾತನಾಡುವ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಹೊಡೆಯುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಊಟದ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ:
ಬೆಳಗ್ಗೆ ತಿಂಡಿಯಲ್ಲಿ ಉಪ್ಪು ಕಡಿಮೆಯಾಗಿದೆ ಎಂದರೆ ರಾತ್ರಿ ಊಟಕ್ಕೆರಾಶಿ ಉಪ್ಪುಸುರಿಯುತ್ತಾರೆ. ರೊಚ್ಚು ಇಟ್ಟುಕೊಂಡು ಅಡುಗೆ ಮಾಡುತ್ತಾರೆ. ಊಟದಲ್ಲಿ ಹುಳಗಳು ಹಾಗೆ ಇರುತ್ತವೆ. ಬಡಿಸುವ ಅಣ್ಣಂದಿರು ನಮ್ಮಮುಖ ನೋಡಿ ಬೇಸರದಲ್ಲಿ ಬಡಿಸುತ್ತಾರೆ. ಜಿಲ್ಲಾಧಿಕಾರಿ, ಶಾಸಕರು ಎಲ್ಲರೂ ಇಲ್ಲಿಗೆ ಬರಬೇಕು.ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ನಮಗೆ ಈ ಪ್ರಾಂಶುಪಾಲರು ಬೇಡವೇ ಬೇಡ: ಬೆಳಗ್ಗೆಯಿಂದ ಪ್ರತಿಭಟನೆ ಆರಂಭಿಸಿರುವ ವಿದ್ಯಾರ್ಥಿಗಳು, ನಮಗೆ ಈ ಪ್ರಾಂಶುಪಾಲರು ಬೇಡ, ನ್ಯಾಯ ಕೊಡಿಸಿ ಎಂದು ಭೀತಿಪತ್ರ ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರಿಗೆ ವಿದ್ಯಾರ್ಥಿಗಳು ತಮ್ಮಮೇಲಿನ ಹಲ್ಲೆ ಕುರಿತು ತಿಳಿಸಿ ಅಳಲು ತೋಡಿಕೊಳ್ಳುತ್ತಿದ್ದಾರೆ.
ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ:
ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲರು, ತಮ್ಮವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕಳೆದ ತಿಂಗಳು ಒಬ್ಬ ಸೆಕ್ಯೂರಿಟಿ ಬಂದಿದ್ದ. ಬಾಯ್ ಹಾಸ್ಟೆಲ್ ನಲ್ಲಿ ಮಲಗುತ್ತಿದ್ದ. ಆತ ಮಕ್ಕಳಿಗೆ ಮೊಬೈಲ್ ಫೋನ್ ಕೊಡುತ್ತಿದ್ದ. ಇದನ್ನು ತಡೆದು, ಮಕ್ಕಳು ಓದಿಗೆ ಗಮನ ಕೊಡುವಂತೆ ಮಾಡಿದ್ದೆ. ಆತನನ್ನು ಕೆಲಸದಿಂದ ತೆಗೆದು ಹಾಕಿದೆವು. ಇದಕ್ಕೆ ನಮ್ಮ ಕೆಲವು ಶಿಕ್ಷಕರು ಕೆಲವರು ಕುಮ್ಮಕ್ಕು ಕೊಟ್ಟು ಈ ರೀತಿ ಮಾಡುತ್ತಿದ್ದಾರೆ. ಶೈಕ್ಷಣಿಕ ಕರ್ತವ್ಯ ಮಾಡಿ ಎಂದಿದ್ದಕ್ಕೆ ಮಕ್ಕಳನ್ನು ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ ಎಂದು ಪ್ರಾಂಶುಪಾಲರು ಆರೋಪಿಸಿದ್ದಾರೆ.








