ಕೇರಳದಲ್ಲಿ ಬಿಜೆಪಿ, ಆರೆಸ್ಸೆಸ್ ತಳವೂರಲು ಬಿಡಲಾರೆವು: ಶೈಲಜಾ ಟೀಚರ್
ಸಿಪಿಎಂ ದ.ಕ.ಜಿಲ್ಲಾ ಸಮ್ಮೇಳನ ಸಮಾರೋಪ
![ಕೇರಳದಲ್ಲಿ ಬಿಜೆಪಿ, ಆರೆಸ್ಸೆಸ್ ತಳವೂರಲು ಬಿಡಲಾರೆವು: ಶೈಲಜಾ ಟೀಚರ್ ಕೇರಳದಲ್ಲಿ ಬಿಜೆಪಿ, ಆರೆಸ್ಸೆಸ್ ತಳವೂರಲು ಬಿಡಲಾರೆವು: ಶೈಲಜಾ ಟೀಚರ್](https://www.varthabharati.in/sites/default/files/images/articles/2021/11/23/314920-1637679327.jpg)
ಮಂಗಳೂರು: ಕೇಂದ್ರದಲ್ಲಿ ಹೆಸರಿಗೆ ಮಾತ್ರ ಬಿಜೆಪಿ ನೇತೃತ್ವದ ಸರಕಾರವಿದೆ. ಆದರೆ ಆಡಳಿತ ನಡೆಸುವುದು ಸಂಘ ಪರಿವಾರವಾಗಿದೆ. ಈ ಸಂಘ ಪರಿವಾರ, ಬಿಜೆಪಿಯು ಭಕ್ತಿಯ ಹೆಸರಲ್ಲಿ ಜನರನ್ನು ಮೋಸಮಾಡುತ್ತದೆ. ದೇಶದ ಬಹುತೇಕ ಕಡೆ ಭಕ್ತಿಯ ಹೆಸರಿನಲ್ಲಿ ಜನರನ್ನು ವಂಚಿಸಿ ಅಧಿಕಾರಕ್ಕೇರಿದ ಬಿಜೆಪಿಯು ಕೇರಳದಲ್ಲೂ ತಳವೂರಲು ಯತ್ನಿಸುತ್ತಿದೆ. ಆದರೆ ಸಿಪಿಎಂ ಅದಕ್ಕೆ ಎಂದೂ ಅವಕಾಶ ಕೊಡುವುದಿಲ್ಲ ಎಂದು ಸಿಪಿಎಂ ಕೇಂದ್ರ ಸಮಿತಿ ಸದಸ್ಯೆ ಹಾಗೂ ಕೇರಳದ ಮಾಜಿ ಸಚಿವೆ, ಹಾಲಿ ಶಾಸಕಿ ಶೈಲಚಾ ಟೀಚರ್ ಹೇಳಿದರು.
ಗುರುಪುರ ಕೈಕಂಬದ ಖಾಸಗಿ ಸಭಾಗೃಹದ ಮೈದಾನದಲ್ಲಿ ನಡೆಯುತ್ತಿರುವ ಸಿಪಿಎಂ ಪಕ್ಷದ ದ.ಕ. ಜಿಲ್ಲಾ 23ನೆ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಂಗಳವಾರ ಅವರು ಮಾತನಾಡಿದರು.
ದೇಶದಲ್ಲಿರುವುದು ಕಾರ್ಪೊರೇಟ್ ಕಂಪೆನಿಗಳ ಸರಕಾರವಾಗಿದೆ. ಅದರ ವಿರುದ್ಧವೂ ಹೋರಾಟ ಆರಂಭವಾಗಿದೆ. ರೈತರ ಹೋರಾಟವು ಕೇವಲ ನರೇಂದ್ರ ಮೋದಿಯ ವಿರುದ್ದವಲ್ಲ. ಕಾರ್ಪೊರೇಟ್ ಕಂಪೆನಿಗಳ ವಿರುದ್ದವೂ ಆಗಿದೆ ಎಂದ ಶೈಲಜಾ ಟೀಚರ್ ಪ್ರಧಾನಿ ನರೇಂದ್ರ ಮೋದಿ ರೈತರ ಅಭಿವೃದ್ಧಿ ಹೆಸರಲ್ಲಿ ಕೃಷಿ ಕಾಯ್ದೆಯನ್ನು ಜಾರಿಗೆಗೊಳಿಸಿದರು. ಈ ಕಾಯ್ದೆಯನ್ನು ಸಮರ್ಥಿಸಿದ್ದ ಬಿಜೆಪಿ ಕಾರ್ಯಕರ್ತರು ಇದೀಗ ವೌನಕ್ಕೆ ಶರಣಾಗಿದ್ದಾರೆ ಎಂದರು.
ಬಿಜೆಪಿ ಪಕ್ಷದ ನೀತಿಗಳು ಕಾರ್ಪೊರೇಟ್ ನೀತಿಗಳಾಗಿದೆ. ಅಲ್ಲದೆ ದೇಶದಲ್ಲಿ ಧರ್ಮಗಳ ಮಧ್ಯೆ ವೈಷಮ್ಯ ತಂದು ಗೊಂದಲ ಸೃಷ್ಟಿಸುತ್ತದೆ. ಈ ದೇಶದಲ್ಲಿ ಕೇವಲ ಹಿಂದೂಗಳು ಮಾತ್ರ ಇದ್ದರೆ ಸಾಕು ಎಂದು ಮೋದಿ, ಅಮಿತ್ ಶಾ, ಸಂಘಪರಿವಾರದ ಮುಖಂಡರು ಹೇಳುತ್ತಾರೆ. ಹಿಂದೂ ಹೆಸರಲ್ಲಿ ಮೇಲ್ಜಾತಿಯವರು ಅಭಿವೃದ್ಧಿ ಹೊಂದಿದರೆ, ಇತರರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಹಿಂದೆ ಗುಜರಾತ್ನಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದ ಭಾವ ಇರಲಿಲ್ಲ, ಕರಸೇವೆಯ ಹೆಸರಲ್ಲಿ ಜನಾಂಗೀಯ ಹತ್ಯೆ ಮಾಡಲಾಗಿದೆ. ಬಿಜೆಪಿಯ ಒಡೆದಾಳುವ ಈ ನೀತಿಯ ವಿರುದ್ಧ ಹೋರಾಟ ತೀವ್ರಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗುವ ಅಪಾಯವಿದೆ ಎಂದು ಶೈಲಜಾ ಟೀಚರ್ ಎಚ್ಚರಿಸಿದರು.
ಕಮ್ಯುನಿಸ್ಟ್ ಪಕ್ಷವು ಈ ದೇಶದ ದುಡಿಯುವ ವರ್ಗದ ಜೀವಾಳವಾಗಿದೆ. ದುಡಿಯುವ ವರ್ಗದ ಮೇಲಿನ ದೌರ್ಜನ್ಯ ವಿರೋಧಿಸಿ ನಿರಂತರ ಹೋರಾಟ ಮಾಡುತ್ತ ಬಂದಿರುವ ಪಕ್ಷ ಸಿಪಿಎಂ ಆಗಿದೆ. ರಷ್ಯಾದಲ್ಲಿ ಹೋರಾಟದ ಕಿಚ್ಚು ಹಚ್ಚಿದ ಕಮ್ಯುನಿಸ್ಟರು ಅಮೆರಿಕ, ಭಾರತ ಮತ್ತಿತರ ರಾಷ್ಟ್ರಗಳಲ್ಲಿ ಸಾಮ್ರಾಜ್ಯಶಾಹಿಗಳು ಮತ್ತು ಬಂಡವಾಳಶಾಹಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಶೈಲಜಾ ಟೀಚರ್ ಹೇಳಿದರು.
ಪಕ್ಷದ ಜಿಲ್ಲಾ ಮುಖಂಡ ವಸಂತ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳದ ಸ್ವಾಗತ ಸಮಿತಿಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪಕ್ಷದ ಮುಖಂಡರಾದ ಕೆ.ಎಸ್.ಶ್ರೀಯಾನ್, ಯುಬಿ ಲೋಕಯ್ಯ, ಯಾದವ ಶೆಟ್ಟಿ, ಕೃಷ್ಣಪ್ಪಸಾಲ್ಯಾನ್, ಸದಾಶಿವ ದಾಸ್, ಪದ್ಮಾವತಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್, ಮನೋಜ್ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು.
ತುಳುನಾಡಿದ ಸಂಸ್ಕೃತಿಯಂತೆ ಶೈಲಜಾ ಟೀಚರ್ರ ತಲೆಗೆ ಮುಟ್ಟಾಳೆ ಇಟ್ಟು, ಫಲಕ ನೀಡಿ ಗೌರವಿಸಲಾಯಿತು.
ಪೊಳಲಿ ದ್ವಾರದ ಬಳಿಯಿಂದ ಸಮ್ಮೇಳನದ ವೇದಿಕೆಯವರೆಗೆ ತಾಲೀಮು, ಹುಲಿವೇಷ ಕುಣಿತ, ಯಕ್ಷಗಾನ ವೇಷಗಳನ್ನೊಳಗೊಂಡ ಕಾರ್ಮಿಕರ ಮೆರವಣಿಗೆ ಸಾಗಿತು.