ರೈತರಿಗೆ ಬೆಳೆ ಪರಿಹಾರ ತಕ್ಷಣ ಬಿಡುಗಡೆಗೆ ಆದೇಶ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ನ.25: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ರಾಗಿ, ಜೋಳ, ಭತ್ತ, ತರಕಾರಿ, ಶೇಂಗಾ ಸೇರಿದಂತೆ ಹಲವಾರು ಬೆಳೆಗಳು ವ್ಯಾಪಕವಾಗಿ ನಾಶವಾಗಿವೆ. ಆದುದರಿಂದ, ಅವುಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಪ್ರಥಮ ಬಾರಿಗೆ ಸರ್ವೆ ಆಗಿ ಪರಿಹಾರ ಆ್ಯಪ್ನಲ್ಲಿ ಮಾಹಿತಿ ಭರ್ತಿ ಆದ ಕೂಡಲೆ ರೈತರ ಖಾತೆಗಳಿಗೆ ಪರಿಹಾರ ಜಮೆಯಾಗುವಂತೆ ಆದೇಶ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆದೇಶದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಕಾರ್ಯದರ್ಶಿ, ಕಂದಾಯ ಇಲಾಖೆಯ ಕಾರ್ಯದರ್ಶಿಗೆ ಆದೇಶ ಮಾಡಿ ರೈತರ ಬೆಳೆ ನಷ್ಟದ ಮಾಹಿತಿ ಭರ್ತಿಯಾಗುತ್ತಿದ್ದಂತೆ ಅವರ ಖಾತೆಗಳಿಗೆ ಪರಿಹಾರದ ಮೊತ್ತ ಜಮೆ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದರು.
ಅಲ್ಲದೆ, ರೈತರಿಗೆ ಪರಿಹಾರ ನೀಡಲು ಹಣದ ಕೊರತೆ ಎದುರಾದಲ್ಲಿ ಒಂದೆರಡು ದಿನ ಮುಂಚಿತವಾಗಿ ತಿಳಿಸಿದರೆ. ಅಗತ್ಯ ಹಣ ಬಿಡುಗಡೆ ಮಾಡುವುದಾಗಿಯೂ ಹಣಕಾಸು ಇಲಾಖೆ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಬೆಳೆ ಪರಿಹಾರ ಆದಷ್ಟು ಬೇಗ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿದ್ದೇವೆ.
ಹಳೆ ಬಾಕಿ ಕೊಟ್ಟು, ಹೊಸದಾಗಿ ಲಭ್ಯವಾಗುವ ಮಾಹಿತಿಯನ್ನಾಧರಿಸಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.





