ಎಲ್ಲ ಬೆಳೆಗಳಿಗೂ ಪರಿಹಾರ ನೀಡಲು ಕ್ರಮ: ಸಚಿವ ಆರ್.ಅಶೋಕ್

ಬೆಂಗಳೂರು, ನ.25: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಜ್ಯಾದ್ಯಂತ ಸುಮಾರು 5 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 1 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದ್ದು ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ನೀಡಲು ತುರ್ತಾಗಿ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಬೇಕು. ಪ್ರತಿನಿತ್ಯ ಜಂಟಿ ಸಮೀಕ್ಷೆ ಮುಗಿದ ನಂತರ ಅಂದೇ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ. ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿ ನವಂಬರ್ 30ರೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಆದೇಶ ನೀಡಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಕೊಡಗು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬೆಳೆ ಮತ್ತು ಆಸ್ತಿ ಹಾನಿಯನ್ನು ಖುದ್ದು ಪರಿಶೀಲನೆ ಮಾಡಿದ್ದೇನೆ. ಎಲ್ಲ ಬೆಳೆಗಳು ಹಾನಿಯಾಗಿದ್ದು, ರಾಗಿ ಬೆಳೆ ಅತೀ ಹೆಚ್ಚು ಅಂದರೆ ಸುಮಾರು 1.5 ಲಕ್ಷ ಹೆಕ್ಟೇರ್ನಷ್ಟು ಹಾಳಾಗಿದೆ.
ಸರಕಾರ 1.5 ಲಕ್ಷ ರೈತರಿಗೆ ಈವರೆಗೆ 130 ಕೋಟಿ ಹಣ ಪಾವತಿ ಮಾಡಿತ್ತು. ನಿನ್ನೆ 70 ಸಾವಿರ ರೈತರಿಗೆ 52 ಕೋಟಿ ಹಣವನ್ನು ನೇರವಾಗಿ ಬ್ಯಾಂಕಿಗೆ ಜಮಾ ಮಾಡಲಾಗಿದೆ. ಒಟ್ಟು 2.2 ಲಕ್ಷ ರೈತರಿಗೆ 180 ಕೋಟಿ ಹಣವನ್ನು ನೀಡಲಾಗಿದೆ ಎಂದರು.
ಮನೆ ಹಾನಿಯಾದವರಿಗೆ ಈವರೆಗೆ 332 ಕೋಟಿ ನೀಡಲಾಗಿತ್ತು. ಮತ್ತೆ 415 ಕೋಟಿ ಹಣ ನೀಡಿದ್ದೇವೆ. ಮನೆಗೆ ನೀರು ನುಗ್ಗಿ ಸಮಸ್ಯೆ ಆದವರಿಗೆ ತಲಾ 10 ಸಾವಿರ ಹಣವನ್ನು 24 ಗಂಟೆಯೊಳಗೆ ನೀಡುತ್ತೇವೆ. ಈವರೆಗೆ 85 ಸಾವಿರ ಜನರಿಗೆ ಸುಮಾರು 85 ಕೋಟಿ ಹಣ ನೀಡಿದ್ದೇವೆ. ರಾಜ್ಯದಲ್ಲಿ ಈ ವರ್ಷ ಮಳೆಯಿಂದ 118 ಜನ ಸಾವನ್ನಪ್ಪಿದ್ದು ತಲಾ 5 ಲಕ್ಷದಂತೆ 5.9 ಕೋಟಿ ನೀಡಲಾಗಿದೆ. ಮನೆ ಬಿದ್ದು ಸಮಸ್ಯೆ ಆದವರಿಗೆ 2 ದಿನದಲ್ಲಿ ಪರಿಹಾರ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಎನ್ಡಿಆರ್ಎಫ್ನಿಂದ 760 ಕೊಟಿ ಬೆಳೆ ಹಾನಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮತ್ತೂ 900 ಕೋಟಿ ಬೇಕು ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸರಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದರು.
ಸಾಮಾನ್ಯ ಬೆಳೆಗೆ 6,800 ರೂ ಬದಲು 20,000, ನೀರಾವರಿ ಜಮೀನಿಗೆ 13,500 ಬದಲು 35,000, ವಾಣಿಜ್ಯ ಬೆಳೆಗೆ 18,000 ಬದಲು 49,000 ರೂಗಳನ್ನು ಪರಿಹಾರವಾಗಿ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇನೆ. ಇದು ಇಡೀ ರಾಷ್ಟ್ರಕ್ಕೆ ಅನ್ವಯವಾಗಲಿದೆ.
ಕಳೆದ 7 ವರ್ಷಗಳಲ್ಲಿ ಮೋದಿ ಸರಕಾರ, ಕಾಂಗ್ರೆಸ್ನ 10 ವರ್ಷಗಳ ಅವಧಿಗಿಂತ ಮೂರು ಪಟ್ಟು ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಅದಕ್ಕಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ರಾಜ್ಯಕ್ಕೆ ಮತ್ತೊಂದು ಸೈಕ್ಲೋನ್
ನ. 26, 27, 28ರಂದು ರಾಜ್ಯಕ್ಕೆ ಮತ್ತೊಂದು ಸೈಕ್ಲೋನ್ ಅಪ್ಪಳಿಸುವ ಸೂಚನೆ ಇದೆ. ಅಗತ್ಯ ಎಚ್ಚರಿಕೆ ಮುಂಜಾಗ್ರತೆ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
-ಆರ್.ಅಶೋಕ್, ಕಂದಾಯ ಸಚಿವ







