'ಶೇ.40 ಕಮಿಷನ್ ' ಆರೋಪ: ರಾಷ್ಟ್ರಪತಿ ಆಡಳಿತ ಹೇರಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ
ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

ಬೆಂಗಳೂರು, ನ. 25: ಸರಕಾರಿ ಕಾಮಗಾರಿಗಳಲ್ಲಿ ಶೇ.40ರಷ್ಟು ಸರಕಾರದ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಮಿಷನ್ ರೂಪದಲ್ಲಿ ನೀಡಬೇಕೆಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಕೋರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.
ಗುರುವಾರ ರಾಜಭವನಕ್ಕೆ ಖುದ್ದು ಭೇಟಿ ನೀಡಿದ ಸಿದ್ದರಾಮಯ್ಯ ನೇತೃತ್ವದ ನಿಯೋಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಮೇಲ್ಮನೆ ಸದಸ್ಯ ನಸೀರ್ ಅಹ್ಮದ್, ವಿಪಕ್ಷ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಆ ಬಳಿಕ ರಾಜಭವನದ ಬಳಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಇತಿಹಾಸದಲ್ಲೇ ಇಂತಹ ಭ್ರಷ್ಟಾಚಾರದ ಪ್ರಕರಣ ಎಂದೂ ನಡೆದಿರಲಿಲ್ಲ. ಹೀಗಾಗಿ ಕೂಡಲೇ ಕರ್ನಾಟಕ ರಾಜ್ಯದಲ್ಲಿ ರಾಷ್ಡ್ರಪತಿ ಆಳ್ವಿಕೆ ಹೇರುವಂತೆ ಮನವಿ ಮಾಡಿದ್ದು, ಈ ತಿಂಗಳ 19 ಹಾಗೂ 20ರಂದು ಪತ್ರಿಕೆಗಳಲ್ಲಿ ವರದಿಯೊಂದು ಬಂದಿತ್ತು, ಆ ವರದಿಯಲ್ಲಿ ಸರಕಾರಿ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಸುಮಾರು ಶೇ.40ರಷ್ಟನ್ನು ಸರ್ಕಾರದ ಸಚಿವರು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಕಮಿಷನ್ ರೂಪದಲ್ಲಿ ನೀಡಬೇಕು ಎಂದು ಗುತ್ತಿದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಹಾಗೂ ಸಂಘದ ಲಕ್ಷಕ್ಕೂ ಅಧಿಕ ಸದಸ್ಯರು ಪ್ರಧಾನಿ ಮೋದಿಯವರಿಗೆ ಜುಲೈ 6 ರಂದು ಪತ್ರ ಬರೆದಿದ್ದಾರೆ. ಗುತ್ತಿದಾರರ ಸಂಘದ ಅಧ್ಯಕ್ಷರು ಇವತ್ತಿನವರೆಗೆ ಹೀಗೆ ಸಚಿವರು, ಸಂಸದರು, ಶಾಸಕರು ಹಾಗೂ ಅಧಿಕಾರಿಗಳಿಗೆ ಶೇ.40ರಷ್ಟು ಕಮಿಷನ್ ಹಣ ನೀಡಲೇಬೇಕಾಗಿದೆ ಎಂದು ಪ್ರಧಾನಿಗೆ ಪತ್ರದ ಮೂಲಕ ದೂರು ನೀಡಿರಲಿಲ್ಲ ಎಂದರು.
ಗುತ್ತಿದಾರರು ಕಮಿಷನ್ ಜೊತೆಗೆ ಜಿಎಸ್ಟಿ ಕಟ್ಟಬೇಕು, ಡೆಪಾಸಿಟ್ ಇಡಬೇಕು, ಆದಾಯ ತೆರಿಗೆ ಪಾವತಿಸಬೇಕು. ಎಂದರೆ ನೂರಕ್ಕೆ ಶೇ.70ರಷ್ಟು ಹಣ ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ನಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ ಮೋದಿ ಅವರು ಕರ್ನಾಟಕದಲ್ಲಿ ಒಮ್ಮೆ ಭಾಷಣ ಮಾಡುವಾಗ ಇಲ್ಲಿನದು ಶೇ.10ರಷ್ಟು ಕಮಿಷನ್ ಸರಕಾರ ಎಂದು ಕರೆದಿದ್ದರು. ಅವರ ಹೇಳಿಕೆಗೆ ಯಾವ ಆಧಾರಗಳೂ ಇರಲಿಲ್ಲ. ಆದರೆ, ಈಗ ನೀಡಿರುವ ಮನವಿಯಲ್ಲಿ ಕೆಂಪಣ್ಣನವರು ಬರೆದಿರುವ ಪತ್ರವನ್ನೇ ನೀಡಿದ್ದೇವೆ, ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯನ್ನು ನೀಡಿದ್ದೇವೆ. ಇದು ಭ್ರಷ್ಟಾಚಾರ ಹಾಗೂ ಹಣದ ಅಕ್ರಮ ವರ್ಗಾವಣೆ ಪ್ರಕರಣವಾಗುತ್ತದೆ ಎಂದು ಸಿದ್ದರಾಮಯ್ಯ ದೂರಿದರು.
ಬಿಡಿಎ ಮೇಲೆ ಎಸಿಬಿ ಅವರು ರೈಡ್ ಮಾಡಿ ಸುಮಾರು 300 ಕೋಟಿ ರೂ.ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಹಾಗಾಗಿ ಈ ಸರಕಾರಕ್ಕೆ ಸಂವಿಧಾನಾತ್ಮಕವಾಗಿ ಆಡಳಿತ ನಡೆಸುವ ಯಾವ ನೈತಿಕ ಹಕ್ಕಿಲ್ಲ, ರಾಜ್ಯದಲ್ಲಿ 356ನೆ ವಿಧಿಯನ್ನು ಜಾರಿಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ರಾಜ್ಯದಲ್ಲಿ ಸಂವಿಧಾನ, ಕಾನೂನು ಕುಸಿದು ಬಿದ್ದಿದೆ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ರಚಿಸಿ, ಅದರ ಮೂಲಕ ತನಿಖೆಯಾಗಬೇಕು ಎಂಬುದು ನಮ್ಮ ಮನವಿಯಾಗಿದೆ. ಪ್ರಧಾನಿಗೆ ಬರೆದ ಪತ್ರದಲ್ಲಿ ನಿರ್ದಿಷ್ಟ ಹೆಸರನ್ನು ಉಲ್ಲೇಖ ಮಾಡದಿದ್ದರು ಸಚಿವರು, ಸಂಸದರು, ಇಲಾಖೆಯ ಮುಖ್ಯ ಅಧಿಕಾರಿಗಳು ಎಂದು ಹೇಳಲಾಗಿದೆ. ಇಷ್ಟು ಸಾಕಾಗಲ್ವ? ಲೋಕೋಪಯೋಗಿ ಇಲಾಖೆ, ಸಣ್ಣ ಹಾಗೂ ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಬಿಬಿಎಂಪಿ ಇಲಾಖೆಯನ್ನು ಹೆಸರಿಸಿದ್ದಾರೆ. ಇನ್ನೇನು ಹೇಳ್ಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದ ಅತ್ಯಂತ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು. ಸಂವಿಧಾನದ 356ನೆ ಕಲಂನ ಪ್ರಕಾರ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದೇವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ವಿವಿಧ ಇಲಾಖೆಗಳಲ್ಲಿ ಕಮಿಷನ್ ಹಿಂಸೆ ಬಗ್ಗೆ ದೂರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ತಮಗಾಗುತ್ತಿರುವ ನೋವು, ಕಿರುಕುಳ ತಡೆಯಲಾರದೆ ದೂರು ಕೊಟ್ಟಿದ್ದಾರೆ. ಅವರ ನೋವು ನೋಡಿಕೊಂಡು ಸುಮ್ಮನೆ ಕೂರಲು ನಮಗೆ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಪ್ರಧಾನಿಗೆ ಹೋಗಿರುವ ದೂರಿನ ಪ್ರತಿಯನ್ನು ಪತ್ರ ಸಮೇತ ರಾಜ್ಯಪಾಲರಿಗೆ ನೀಡಿದ್ದೇವೆ. ಈ ಸರಕಾರವನ್ನು ವಜಾ ಮಾಡಬೇಕು. ಗುತ್ತಿಗೆದಾರರ ಸಂಘದ ದೂರಿನ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದೇವೆ. ಇದರ ಜತೆಗೆ ನಾನಾ ಇಲಾಖೆಯ ಕಾಮಗಾರಿಗಳ ಅಂದಾಜು ವೆಚ್ಚ ಡಬಲ್ ಆಗುತ್ತಿದೆ. 100 ಕೋಟಿ ರೂ.ಕಾಮಗಾರಿಗೆ 200 ಕೋಟಿ ರೂ.ತೋರಿಸಲಾಗುತ್ತಿದೆ. ಅದರ ಬಗ್ಗೆಯೂ ನಮ್ಮ ಬಳಿ ದಾಖಲೆಗಳು ಇವೆ. ಒಂದೆರಡು ದಿನದಲ್ಲೇ ಅವುಗಳನ್ನು ಬಿಡುಗಡೆ ಮಾಡುತ್ತೇವೆ. ಈ ಹಿಂದೆ ಯಡಿಯೂರಪ್ಪನವರ ಸರಕಾರ ಇದ್ದಾಗ ಕೆಲವು ಮಂತ್ರಿಗಳು ಅದರಲ್ಲೂ ವಿಶೇಷವಾಗಿ ನೀರಾವರಿ, ಕಾರ್ಪೊರೇಷನ್ನಲ್ಲಿ ಡಬಲ್, ಡಬಲ್ ಲೆಕ್ಕ ನೀಡಲಾಗಿದೆ. ಯಾವ, ಯಾವ ಇಲಾಖೆಯಲ್ಲಿ ಎಷ್ಟೆಷ್ಟು ವ್ಯವಹಾರ ನಡೆದಿದೆ ಎಂಬುದನ್ನು ದಾಖಲೆ ಸಮೇತ ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ನಿನ್ನೆ, ಇವತ್ತು ನೋಡಿದ್ದೀರಲ್ಲ. ಭ್ರಷ್ಟ ಅಧಿಕಾರಿಗಳು, ಸಿಬ್ಬಂದಿ ಮೇಲೆ ನಡೆಯುತ್ತಿರುವ ಎಸಿಬಿ ದಾಳಿಯನ್ನು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿರುವುದಕ್ಕೆ ಇದು ಚಿಕ್ಕ ಸ್ಯಾಂಪಲ್. ಸರಕಾರದ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಹಂತ-ಹಂತವಾಗಿ ಹೋರಾಟ ರೂಪಿಸುತ್ತೇವೆ. ಪಕ್ಷದ ನಾಯಕರ ಜತೆ ಚರ್ಚಿಸಿ, ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ'
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ








