ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ನೊಂದಿಗೆ ಮೈತ್ರಿ ಕುರಿತು ಸಿಎಂ ಬೊಮ್ಮಾಯಿ ಹೇಳಿದ್ದೇನು?
ದಾವಣಗೆರೆ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ನೊಂದಿಗೆ ಅಧಿಕೃತವಾಗಿ ಎಲ್ಲೂ ಸಹ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ, ನಮ್ಮ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ 40 ವರ್ಷದ ಅನುಭವದ ಮೇಲೆ ಬೆಂಬಲ ಪಡೆಯುವುದಾಗಿ ಹೇಳಿದ್ದು, ಸಾಧ್ಯವಾದ ಕಡೆ ಬೆಂಬಲ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಸಲ್ಲಿಸಿರುವ ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳುವಂತೆ ಅವರಿಗೆ ಸೂಚನೆ ನೀಡಿದ್ದು, ಇಂದು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಭತ್ತ, ಮೆಕ್ಕೆಜೋಳ, ದಕ್ಷಿಣ ಕರ್ನಾಟಕದಲ್ಲಿ ಭತ್ತ, ರಾಗಿ, ತರಕಾರಿ ಬೆಳೆ ನೆಲಕಚ್ಚಿದ್ದು, ಸಾಕಷ್ಟು ನಷ್ಟವಾಗಿದೆ. ಹೀಗಾಗಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ವರದಿಯನ್ನು ಪರಿಹಾರ ಆಪ್ಗೆ ಅಪ್ಲೋಡ್ ಮಾಡಿದ ತಕ್ಷಣವೇ ವರದಿಯ ಆಧಾರದ ಮೇಲೆ 24 ಗಂಟೆಯೊಳಗೆ ಬೆಳೆ ಹಾನಿ ಪರಿಹಾರ ನೀಡಲು ಸೂಚಿಸಿದ್ದೇನೆ ಎಂದು ಹೇಳಿದರು.