ಮಂಗಳೂರು; ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 7 ವರ್ಷ ಕಠಿಣ ಸಜೆ, ದಂಡ
ಮಂಗಳೂರು, ನ. 27: ಏಳು ವರ್ಷಗಳ ಹಿಂದೆ ಸಂಭವಿಸಿದ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಬಂಧಿಸಿ ಆರೋಪಿ ಬೆಳ್ತಂಗಡಿ ತಾಲೂಕು ಕೇಪು ಗ್ರಾಮದ ನೀರ್ಕಜೆಯ ನಿತಿನ್ (27) ಎಂಬಾತನಿಗೆ 7 ವರ್ಷಗಳ ಕಠಿಣ ಸಜೆ ಮತ್ತು 15,000 ರೂ. ದಂಡ ವಿಧಿಸಿ ಮಂಗಳೂರಿನ 1ನೇ ತ್ವರಿತ ಗತಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಬಾಲಕಿಯ ಅಪಹರಣ ಆರೋಪಕ್ಕೆ (ಐಪಿಸಿ 366ಎ) 3 ವರ್ಷ ಕಠಿನ ಶಿಕ್ಷೆ ಮತ್ತು 5000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 15 ದಿನಗಳ ಕಠಿಣ ಶಿಕ್ಷೆ, ಅತ್ಯಾಚಾರ ಆರೋಪಕ್ಕೆ (ಐಪಿಸಿ 376 ಮತ್ತು ಪೊಕ್ಸೊ ಸೆಕ್ಷನ್ 4) 7 ವರ್ಷ ಕಠಿಣ ಸಜೆ ಮತ್ತು 10,000 ರೂ. ದಂಡ ಹಾಗೂ ದಂತ ಪಾವತಿಸಲು ತಪ್ಪಿದರೆ 2 ತಿಂಗಳ ಕಠಿಣ ಸಜೆಯನ್ನು ಅನುಭವಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಪ್ರಕರಣ ವಿವರ: ವೃತ್ತಿಯಲ್ಲಿ ಖಾಸಗಿ ಬಸ್ ಕಂಡಕ್ಟರ್ ಆಗಿದ್ದ ನಿತಿನ್ಗೆ ಆತ ಕಾರ್ಯ ನಿರ್ವಹಿಸುತ್ತಿದ್ದ ಬಸ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದ 17 ವರ್ಷ ಪ್ರಾಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪರಿಚಯವಾಗಿತ್ತು. ಈ ಪರಿಚಯ ಮುಂದೆ ಫೋನ್ ನಲ್ಲಿ ನಿರಂತರ ಮಾತುಕತೆಗೆ ಕಾರಣವಾಗಿತ್ತು. 2014 ಜುಲೈ 24 ರಂದು ಆತ ಆಕೆಯನ್ನು ಪುತ್ತೂರಿಗೆ ಬರುವಂತೆ ಹೇಳಿದ್ದು, ಅದರಂತೆ ಬಾಲಕಿ ಅಂದು ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದಳು. ಹಾಗೆ ಪುತ್ತೂರಿನಲ್ಲಿ ಇಬ್ಬರೂ ಭೇಟಿಯಾಗಿದ್ದು, ಆತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮೊದಲು ಕಟೀಲಿಗೆ ಹಾಗೂ ಬಳಿಕ ಅಲ್ಲಿಂದ ಮಂಗಳೂರಿಗೆ ಕರೆದೊಯ್ದು ರಾತ್ರಿ ವೇಳೆ ಕೆಎಸ್ಆರ್ಟಿಸಿ ಸ್ಲೀಪರ್ ಬಸ್ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದನು. ಹಾಗೆ ಬಸ್ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು ಎಂದು ಆರೋಪಿಸಲಾಗಿತ್ತು.
ಈತನ್ನಧ್ಯೆ ಕಾಲೇಜಿಗೆಂದು ಹೋಗಿದ್ದ ತಮ್ಮ ಪುತ್ರಿ ಮನೆಗೆ ವಾಪಸಾಗದ ಕಾರಣ ಬಾಲಕಿಯ ಹೆತ್ತವರು ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿ ನಿತಿನ್ ಜತೆಗೆ ಬೆಂಗಳೂರಿಗೆ ತೆರಳಿದ ಬಗ್ಗೆ ಸುಳಿವು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬೆಂಗಳೂರಿಗೆ ತೆರಳಿದ್ದರು.
ಎರಡು ದಿನ ಬೆಂಗಳೂರಿನಲ್ಲಿ ಸುತ್ತಾಡಿದ ನಿತಿನ್ ಮತ್ತು ಬಾಲಕಿ ಜು. 27 ರಂದು ಬೆಳಗ್ಗೆ ಊರಿಗೆ ಹಿಂದಿರುಗಲು ಬೆಂಗಳೂರಿನ ಬಸ್ ನಿಲ್ದಾಣಕ್ಕೆ ತಲುಪಿದಾಗ ಅಲ್ಲಿದ್ದ ವಿಟ್ಲ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು ಊರಿಗೆ ಕರೆ ತಂದಿದ್ದರು.
ಬಾಲಕಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ನಿತಿನ್ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ಬಳಿಕ ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ನಡೆಸಿದ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ತನಿಖೆಯನ್ನು ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ 1 ನೇ ತ್ವರಿತ ಗತಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಾವಿತ್ರಿ ವಿ. ಭಟ್ ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದು ನ.25 ರಂದು ಆರೋಪಿ ತಪ್ಪಿತಸ್ಥ ಎಂಬುದಾಗಿ ಘೋಷಿಸಿದ್ದರು. ಶನಿವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಸಿ. ವೆಂಕಟರಮಣ ಸ್ವಾಮಿ ಅವರು ವಾದಿಸಿದ್ದರು. ಒಟ್ಟು 21 ಸಾಕ್ಷಿಗಳ ವಿಚಾರಣೆ ನಡೆಸಿದ್ದು, 24 ದಾಖಲೆಗಳನ್ನು ಗುರುತಿಸಲಾಗಿತ್ತು.
ಕೈಯಲ್ಲಿ ಕಾಸಿಲ್ಲದೆ ಬಾಲಕಿಯ ಚಿನ್ನ ಅಡವಿಟ್ಟಿದ್ದ!
ಆರೋಪಿ ನಿತಿನ್ಗೆ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ಯಲು ಕೈಯಲ್ಲಿ ಹಣ ಇರಲಿಲ್ಲ. ಹಾಗಾಗಿ ಬಾಲಕಿಯ ಕಿವಿಯ ಚಿನ್ನಾಭರಣಗಳನ್ನು ಪಡೆದು, ಅದನ್ನು ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಅಡವಿಟ್ಟು 2,850 ರೂ. ಹಣ ಪಡೆದು ಅದನ್ನು ತಮ್ಮ ಬೆಂಗಳೂರು ಪ್ರಯಾಣಕ್ಕೆ ಬಳಸಿಕೊಂಡಿದ್ದನು.