ಸಂವಿಧಾನ ವಿರೋಧಿಗಳಿಂದಲೇ ಸಂವಿಧಾನ ದಿನಾಚರಣೆಯ ನಾಟಕ: ಶ್ಯಾಮರಾಜ್ ಬಿರ್ತಿ
![ಸಂವಿಧಾನ ವಿರೋಧಿಗಳಿಂದಲೇ ಸಂವಿಧಾನ ದಿನಾಚರಣೆಯ ನಾಟಕ: ಶ್ಯಾಮರಾಜ್ ಬಿರ್ತಿ ಸಂವಿಧಾನ ವಿರೋಧಿಗಳಿಂದಲೇ ಸಂವಿಧಾನ ದಿನಾಚರಣೆಯ ನಾಟಕ: ಶ್ಯಾಮರಾಜ್ ಬಿರ್ತಿ](https://www.varthabharati.in/sites/default/files/images/articles/2021/11/27/315482-1638028600.jpg)
ಬಹ್ಮಾವರ, ನ.27: ಸಂವಿಧಾನ ವಿರೋಧಿಗಳಿಂದಲೇ ಸಂವಿಧಾನ ದಿನ ಆಚರಿಸುತ್ತಿರುವುದು ದೊಡ್ಡ ಡೊಂಗಿ ಹಾಗೂ ನಾಟಕ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಟೀಕಿಸಿದ್ದಾರೆ.
ಬ್ರಹ್ಮಾವರ ತೆಂಕುಬಿರ್ತಿ ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ನ.26ರಂದು ಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.
ಸಂವಿಧಾನ ಬದಲಾಯಿಸಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದದ್ದೂ ಅಂತ ಹೇಳಿಕೆ ಕೊಟ್ಟ ಕಡೆಯವರಿಂದಲೇ ಸಂವಿಧಾನ ದಿನ ಕಾರ್ಯಕ್ರಮಗಳು ನಡೆಯುತ್ತಿರುವುದು ಈ ದೇಶದ ದೊಡ್ಡ ದುರಂತವೇ ಸರಿ. ಅಂಬೇಡ್ಕರ್ ಅಂದೇ ಹೇಳಿದಂತೆ ಈ ಸಂವಿಧಾನ ಅಯೋಗ್ಯರ ಕೈಗೆ ಸಿಕ್ಕಿದರೆ ಅದರಿಂದ ಏನೂ ಪ್ರಯೋಜನ ಸಾಧ್ಯವಿಲ್ಲ. ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದರಿಂದಾ ಗುವ ಅಭಿವೃದ್ಧಿ ಮಾತ್ರ ಅದನ್ನು ಅನುಷ್ಠಾನ ಗೊಳಿಸುವವರನ್ನು ಅವಲಂಬಿಸಿದೆ ಎಂದರು.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ ವಿಠಲ ಮಾತನಾಡಿ, ಇಂದಿನ ಯುವ ಪೀಳಿಗೆಯ ಯುವಕರು ಈ ದೇಶದಲ್ಲಿ ಯಾರು ದಲಿತ ವಿರೋಧಿಗಳು, ಸಂವಿಧಾನ ವಿರೋಧಿಗಳು, ಜಾತೀವಾಧಿಗಳು ಎಂಬುದನ್ನು ಸರಿಯಾಗಿ ಅರ್ಥೈಸಿಕೊಂಡು ಬದುಕಬೇಕು. ಬರೀ ಪೊಳ್ಳು ಮಾತುಗಳಿಗೆ ಬಲಿಯಾಗಿ ಹಿಂದುತ್ವದ ಅಮಲಿಗೆ ಬಲಿಯಾಗಬಾರದು ಎಂದರು.
ಸಂವಿಧಾನದ ಪೀಠಿಕೆಯನ್ನು ಓದಿ ಪ್ರಮಾಣ ವಚನ ಸ್ವೀಕರಿಸಲಾಯಿತು. ಅಂಬೇಡ್ಕರ್ ಯುವಕ ಮಂಡಲದ ಮಾಜಿ ಅಧ್ಯಕ್ಷ ಹರೀಶ್ ಕುಮಾರ್, ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್, ಆದಿ ದ್ರಾವಿಡ ಸಹಕಾರ ಸಂಘದ ಅಧ್ಯಕ್ಷ ವರ್ಣ ವಿಶ್ವನಾಥ್, ಉಪಾಧ್ಯಕ್ಷ ಸುಧಾಕರ ಗುಜ್ಜರ್ಬೆಟ್ಟು, ಬಿರ್ತಿ ಸುರೇಶ್, ವರದರಾಜ್ ಬಿರ್ತಿ, ಶಿವಾನಂದ ಬಿರ್ತಿ, ಸಂತೋಷ ಬಿರ್ತಿ, ಪ್ರಶಾಂತ್ ಬಿರ್ತಿ ಉಪಸ್ಥಿತರಿದ್ದರು.