ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ವೀಕ್ಷಕರ ನೇಮಕ
ಬೆಂಗಳೂರು, ನ.27: ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 20 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಪ್ರತಿಯೊಂದು ವಿಧಾನಪರಿಷತ್ ಸದಸ್ಯ ಕ್ಷೇತ್ರಕ್ಕೆ ಪಕ್ಷದ ವತಿಯಿಂದ ವೀಕ್ಷಕರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ನಿಯೋಜಿತ ವೀಕ್ಷಕರು ತಮಗೆ ವಹಿಸಲಾದ ಕ್ಷೇತ್ರಕ್ಕೆ ತೆರಳಿ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಚುನಾವಣೆ ಸಂಬಂಧ ಏನಾದರೂ ಸಮಸ್ಯೆಗಳಿದ್ದರೆ ಪರಿಹರಿಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮಾಡಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯು ಅತೀ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸುವಂತೆ ಎಲ್ಲ ರೀತಿಯಿಂದ ಪ್ರಯತ್ನಿಸುವಂತೆ ಶಿವಕುಮಾರ್ ಕೋರಿದ್ದಾರೆ.
ಹಾಗೆಯೇ, ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಭೇಟಿ ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪಕ್ಷದ ಎಲ್ಲ ಸ್ಥಳೀಯ ಮುಖಂಡರ ಸಹಕಾರದಲ್ಲಿ ಕಾರ್ಯನಿರ್ವಹಿಸಿ, ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲೆ ವಾಸ್ತವ್ಯ ಮಾಡಿ ಪ್ರತಿದಿನ ದೂರವಾಣಿ ಮೂಲಕ ವರದಿಯನ್ನು ನೀಡುವಂತೆ ಶಿವಕುಮಾರ್ ಸೂಚಿಸಿದ್ದಾರೆ.
ತುಮಕೂರು-ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ರಿಝ್ವಾನ್ ಅರ್ಶದ್, ಹಾಸನ-ಸಂಸದ ಡಿ.ಕೆ.ಸುರೇಶ್, ಕೋಲಾರ-ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಚಿಕ್ಕಮಗಳೂರು-ಮಾಜಿ ಸಚಿವ ಕೆ.ಜೆ.ಜಾರ್ಜ್, ಬೆಳಗಾವಿ-ಶಾಸಕ ಎನ್.ಎ.ಹಾರೀಸ್, ಚಿಕ್ಕಬಳ್ಳಾಪುರ-ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್.
ಚಿಕ್ಕೋಡಿ-ವಿಧಾನಪರಿಷತ್ ಮಾಜಿ ಸದಸ್ಯ ಐವಾನ್ ಡಿ’ಸೋಜ, ಬಳ್ಳಾರಿ-ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ಬೀದರ್-ಮಾಜಿ ಸಂಸದ ಶಿವರಾಮೇಗೌಡ, ದಾವಣಗೆರೆ-ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಿತ್ರದುರ್ಗ-ಮಾಜಿ ಸಚಿವ ಎಚ್.ಎಂ.ರೇವಣ್ಣ ಹಾಗೂ ಕೊಡುಗು-ಮಾಜಿ ಶಾಸಕ ವಾಸು ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.