ಅಂಬೇಡ್ಕರ್ ಯುವಸೇನೆ ಉದ್ಘಾಟನೆ
ಮಂಗಳೂರು, ನ.29: ಅಂಬೇಡ್ಕರ್ ಯುವ ಸೇನೆಯ ಉಳೆಪಾಡಿ ಕಂಗುರಿ ಶಾಖೆಯ ಉದ್ಘಾಟನೆಯು ಇತ್ತೀಚೆಗೆ ಉಳೆಪಾಡಿ ಸರಕಾರಿ ಶಾಲೆಯಲ್ಲಿ ನಡೆಯಿತು.
ಘಟಕ ಉದ್ಘಾಟಿಸಿ ಮಾತನಾಡಿದ ಎಸಿಪಿ ಮಹೇಶ್ ಕುಮಾರ್ ಸಮಾಜದ ಕಟ್ಟಕಡೆಯ ವ್ಯಕ್ತಿ ಸ್ವಾಭಿಮಾನದಿಂದ ಬದುಕಲು ಡಾ.ಬಿ.ಆರ್. ಅಂಬೇಡ್ಕರ್ ಕಾರಣ. ಅವರ ಕನಸು ಮತ್ತು ಕಲ್ಪನೆಯನ್ನು ನನಸಾಗಿಸಲು ಯುವ ಸಂಘಟನೆಗಳು ಮುಂದಾಗ ಬೇಕು ಎಂದರು.
ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ಚಿಂತಕ ಜಯನ್ ಮಲ್ಪೆ ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧರಾಗಬೇಕು. ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಯೋಜನೆಯನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿ ಆರ್ಥಿಕವಾಗಿ ಬಲಿಷ್ಠಗೊಳಿಸಲು ಮುಂದಾಗಬೇಕು ಎಂದರು.
ಈ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಜಾನಪದ ಕಲಾವಿದ ಆನಂದ ಕೆ. ಮುಂಡಿಕಾಡು, ಐಕಳ ಗ್ರಾಪಂ ಪೌರ ಕಾರ್ಮಿಕ ಶೇಖರ, ಹಿರಿಯ ನಾಗರಿಕ ರಾಜು ಉಳೆಪಾಡಿ ಅವರನ್ನು ಸನ್ಮಾನಿಸಲಾಯಿತು.
ದಲಿತ ಮುಖಂಡ ಸದಾಶಿವ ಉರ್ವಸ್ಟೋರ್ ಅಧ್ಯಕ್ಷತೆ ವಹಿಸಿದ್ದರು. ಮುಲ್ಕಿ ಠಾಣೆಯ ನಿರೀಕ್ಷಕ ಕುಸುಮಾಧರ್, ಅಂಬೇಡ್ಕರ್ ಯುವ ಸೇನಾ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಮುಖಂಡರಾದ ಗಣೇಶ್ ನೇರ್ಗಿ, ಪಿ. ಕೃಷ್ಣ ಬಂಗೇರಾ, ಲೋಕೇಶ್ ಪಡುಬಿದ್ರೆ, ಸುಧಾಕರ ಮುಲ್ಕಿ ಉಪಸ್ಥಿತರಿದ್ದರು.
ರಾಮಚಂದ್ರ ಕಂಗುರಿ ಸ್ವಾಗತಿಸಿದರು. ಸಂತೋಷ್ ಪಡುಬಿದ್ರೆ ಮತ್ತು ಕಾರ್ತಿಕ್ ಮುಲ್ಕಿ ಕಾರ್ಯಕ್ರಮ ನಿರೂಪಿಸಿದರು.