ಖಾಸಗೀಕರಣದ ವಿರುದ್ಧ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದಿಂದ ರಾಷ್ಟ್ರವ್ಯಾಪಿ ಚಳವಳಿ ಆರಂಭ
'ಬ್ಯಾಂಕ್ ಬಚಾವೋ ದೇಶ್ ಬಚಾವೋ ರ್ಯಾಲಿ'ಗೆ ಚಾಲನೆ

Photo: Twitter/@DSFJNU
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವುದರ ವಿರುದ್ಧ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಮಂಗಳವಾರ ರಾಷ್ಟ್ರವ್ಯಾಪಿ ಚಳವಳಿಯನ್ನು ಆರಂಭಿಸಿದೆ ಎಂದು indianexpress.com ವರದಿ ಮಾಡಿದೆ.
'ಬ್ಯಾಂಕ್ ಬಚಾವೋ ದೇಶ್ ಬಚಾವೋ ರ್ಯಾಲಿ' ಮಂಗಳವಾರ ರಾಷ್ಟ್ರರಾಜಧಾನಿಯ ಜಂತರ್ ಮಂತರ್ನಲ್ಲಿ ನಡೆದಿದ್ದು, ದೇಶದ ವಿವಿಧ ಭಾಗಗಳಿಂದ ಅಧಿಕಾರಿಗಳು ಹಾಗೂ ಇತರ ಪಾಲುದಾರರು ಭಾಗವಹಿಸಿದ್ದರು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಹೇಳಿಕೆಯೊಂದರಲ್ಲಿ ತಿಳಿಸಿದೆ.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲು ಹಾಗೂ ಅಂಗೀಕರಿಸಲು ಪಟ್ಟಿ ಮಾಡಲಾದ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ-2021 ಅನ್ನು ಹಿಂಪಡೆಯುವಂತೆ ಸರಕಾರಕ್ಕೆ ಮನವಿ ಮಾಡಿದರು.
ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣಕ್ಕೆ ದಾರಿ ಮಾಡಿ ಕೊಡುವ ಮಸೂದೆಯನ್ನು ಸರಕಾರ ಮಂಡಿಸಿ ಅಂಗೀಕರಿಸಿದರೆ, ಬ್ಯಾಂಕ್ ಅಧಿಕಾರಿಗಳು ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ಪಾಲುದಾರರನ್ನು ಒಗ್ಗೂಡಿಸಿ ರಾಷ್ಟ್ರವ್ಯಾಪಿ ಆಂದೋಲನವನ್ನು ಆರಂಭಿಸುತ್ತಾರೆ. ರೈತ ಚಳವಳಿಯಿಂದ ಪ್ರೇರಣೆ ಪಡೆಯುವಂತೆ ಬ್ಯಾಂಕರ್ ಗಳನ್ನು ಒತ್ತಾಯಿಸಿದರು.







