"ಶಾರುಖ್ ಖಾನ್ ಬಲಿಪಶುವಾಗಿದ್ದಾರೆ": ಮುಂಬೈನಲ್ಲಿ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
ಮುಂಬೈ: ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು, ಮಾಜಿ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಸೆಲೆಬ್ರಿಟಿಗಳನ್ನು ಒಳಗೊಂಡ ಬೃಹತ್ ಪ್ರೇಕ್ಷಕರ ಮುಂದೆ ಇಂದು ಮುಂಬೈನಲ್ಲಿ ಮಾತನಾಡಿದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೆಗಾಸ್ಟಾರ್ ಶಾರುಖ್ ಖಾನ್ "ಬಲಿಪಶು" ಆಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಬಿಜೆಪಿಯನ್ನು "ಕ್ರೂರ ಮತ್ತು ಪ್ರಜಾಪ್ರಭುತ್ವ ವಿರೋಧಿ ಪಕ್ಷ" ಎಂದು ಕರೆದ ಅವರು, ಏಕತೆಯ ಅಗತ್ಯವನ್ನು ಒತ್ತಿಹೇಳಿದರು. ಮುಂಬರುವ ಯುದ್ಧಕ್ಕೆ ಸಲಹೆ ಹಾಗೂ ಮಾರ್ಗದರ್ಶನವನ್ನು ಕೋರಿದರು.
ಶಿವಾಜಿಯ ಕುರಿತು ರವೀಂದ್ರನಾಥ ಠಾಗೋರ್ ಅವರ ಕವಿತೆಯನ್ನು ಉಲ್ಲೇಖಿಸಿದ ಅವರು, ಬಂಗಾಳ ಹಾಗೂ ಮಹಾರಾಷ್ಟ್ರದ ನಡುವೆ ಈಗಾಗಲೆ "ಸೇತುವೆ" ಇದೆ ಎಂದು ಹೇಳಿದರು.
"ಭಾರತವು ಜನಬಲವನ್ನು ಪ್ರೀತಿಸುತ್ತದೆ, ಭುಜಬಲವನ್ನಲ್ಲ. ನಾವು ಕ್ರೂರ ಪ್ರಜಾಪ್ರಭುತ್ವ ವಿರೋಧಿ ಪಕ್ಷವಾದ ಬಿಜೆಪಿಯನ್ನು ಎದುರಿಸುತ್ತಿದ್ದೇವೆ. ನಾವು ಒಟ್ಟಿಗೆ ಇದ್ದರೆ ನಾವು ಗೆಲ್ಲುತ್ತೇವೆ" ಎಂದು ಮಹಾರಾಷ್ಟ್ರ ರಾಜ್ಯಕ್ಕೆ ಎರಡು ದಿನಗಳ ಭೇಟಿಯಲ್ಲಿರುವ ತೃಣಮೂಲ ಮುಖ್ಯಸ್ಥೆ ಹೇಳಿದರು.
ಮಹೇಶ್ ಜೀ (ಚಿತ್ರ ನಿರ್ದೇಶಕ ಮಹೇಶ್ ಭಟ್), ನೀವು ಬಲಿಪಶುವಾಗಿದ್ದೀರಿ, ಶಾರುಖ್ ಖಾನ್ ಕೂಡ ಬಲಿಪಶುವಾಗಿದ್ದಾರೆ. ನಾವು ಗೆಲ್ಲಬೇಕಾದರೆ, ನೀವು ಎಲ್ಲಿ ಬೇಕಾದರೂ ಹೋರಾಡಬೇಕು ಹಾಗೂ ಮಾತನಾಡಬೇಕು. ನೀವು ನಮಗೆ ಮಾರ್ಗದರ್ಶನ ನೀಡುತ್ತೀರಿ ಹಾಗೂ ರಾಜಕೀಯ ಪಕ್ಷವಾಗಿರುವ ನಮಗೆ ಸಲಹೆ ನೀಡುತ್ತೀರಿ ”ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.