ಕಾರ್ಕಳ ಉತ್ಸವ ಹೊಸ ಭಾಷ್ಯ ಬರೆಯಲಿದೆ: ಶ್ರೀ ಲಲಿತಕೀರ್ತಿ ಮಹಾಸ್ವಾಮೀಜಿ
ಕಾರ್ಕಳ ಉತ್ಸವಕ್ಕೆ ಚಪ್ಪರ ಮುಹೂರ್ತ
ಕಾರ್ಕಳ, ಡಿ.2: ನಮ್ಮ ಸಂಸ್ಕೃತಿ, ಕಲೆ, ಶಿಲ್ಪಕಲೆ ವೈಭವವನ್ನು ಮತ್ತೆ ಸಾರುವ ನಿಟ್ಟಿನಲ್ಲಿ ಕಾರ್ಕಳ ಉತ್ಸವ ಹೊಸ ಭಾಷ್ಯ ಬರೆಯಲಿದೆ ಎಂದು ಕಾರ್ಕಳ ಜೈನ ಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.
ಅವರು ಡಿ.2ರಂದು ಕಾರ್ಕಳ ಉತ್ಸವಕ್ಕೆ ಸ್ವರಾಜ್ ಮೈದಾನದಲ್ಲಿ ಚಪ್ಪರ ಮುಹೂರ್ತ ನೆರವೇರಿಸಿ ಬಳಿಕ ಆಶೀರ್ವಚನ ನೀಡಿದರು.
ಹೊಸ ಪರಿಕಲ್ಪನೆ ಸರ್ವರ ಸಹಕಾರದೊಂದಿಗೆ ಕಾರ್ಕಳ ಉತ್ಸವ ನಡೆಯುತ್ತಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬೈಲೂರು ರಾಮಕೃಷ್ಣ ಆಶ್ರಮದ ಸ್ವಾಮಿ ಶ್ರೀ ವಿನಾಯಕಾನಂದಜೀ ಮಹಾರಾಜ್ ಮಾತನಾಡಿ, ಸಂಸ್ಕೃತಿ ಆಧ್ಯಾತ್ಮಿಕತೆಯ ಮೂಲ. ಆಧುನಿಕತೆ, ಅನ್ವೇಷಣೆ ಹೆಸರಲ್ಲಿ ನಮ್ಮ ಸಂಸ್ಕೃತಿ ಕಲೆ ಅವನತಿಯತ್ತ ಸಾಗಬಾರದು. ಇಂತಹ ಸನ್ನಿವೇಶದಲ್ಲಿ ಕಾರ್ಕಳ ಉತ್ಸವ ನಡೆಯುತ್ತಿರುವುದು ಅತ್ಯಂತ ಅರ್ಥಪೂರ್ಣ ಎಂದರು.
ಕಾರ್ಕಳದ ಕಲೆ, ಸಂಸ್ಕೃತಿಯನ್ನು ಉಳಿದ ಜಿಲ್ಲೆಗಳಿಗೆ ತಿಳಿಸಿಕೊಡುವ ಪ್ರಯತ್ನದೊಂದಿಗೆ ಸಾಹಿತ್ಯ ಸಂಸ್ಕೃತಿ, ಭಾಷೆ ಸಮ್ಮಿಳಿತ ಕಾರ್ಯಕ್ರಮ ಕಾರ್ಕಳ ಉತ್ಸವವಾಗಿದೆ. ಇದು ನಮ್ಮೆಲ್ಲರ ಉತ್ಸವವಾಗಿ ಮೂಡಿಬರಲಿ ಎಂದು ಸಚಿವ ವಿ.ಸುನೀಲ್ ಕುಮಾರ್ ಆಶಯ ವ್ಯಕ್ತಪಡಿಸಿದರು.
ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜ್ಯೋತಿ ರಮೇಶ್ ಪ್ರಾರ್ಥಿಸಿದರು. ಯೋಗೀಶ್ ಕಿಣಿ ಕಾರ್ಕಳ ಗೀತೆ ಹಾಡಿದರು. ಸುಮಿತ್ ಶೆಟ್ಟಿ ಕೌಡೂರು ಸ್ವಾಗತಿಸಿ, ರವೀಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗುಣವಂತೇಶ್ವರ ಭಟ್ ವಂದಿಸಿದರು.