ಆಟೋ ರಿಕ್ಷಾ ಚಾಲನೆಯಲ್ಲಿರುವಾಗಲೇ ಚಾಲಕ ಹೃದಯಾಘಾತದಿಂದ ಮೃತ್ಯು
ಮಂಗಳೂರು ನೇತ್ರಾವತಿ ಸೇತುವೆಯಲ್ಲಿ ಘಟನೆ
![ಆಟೋ ರಿಕ್ಷಾ ಚಾಲನೆಯಲ್ಲಿರುವಾಗಲೇ ಚಾಲಕ ಹೃದಯಾಘಾತದಿಂದ ಮೃತ್ಯು ಆಟೋ ರಿಕ್ಷಾ ಚಾಲನೆಯಲ್ಲಿರುವಾಗಲೇ ಚಾಲಕ ಹೃದಯಾಘಾತದಿಂದ ಮೃತ್ಯು](https://www.varthabharati.in/sites/default/files/images/articles/2021/12/3/316211-1638513044.jpeg)
ಮುಹಮ್ಮದ್ ಹನೀಫ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ
ಮಂಗಳೂರು, ಡಿ.3: ನಗರದಿಂದ ತೊಕ್ಕೊಟ್ಟು ಕಡೆಗೆ ಚಲಿಸುತ್ತಿದ್ದ ಆಟೋ ರಿಕ್ಷಾವೊಂದರ ಚಾಲಕ ಚಾಲನೆ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.
ಮೃತರನ್ನ ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಹನೀಫ್ (46) ಎಂದು ಗುರುತಿಸಲಾಗಿದೆ. ಕಲ್ಲಾಪುವಿನಲ್ಲಿರುವ ಗ್ಲೋಬಲ್ ಮಾರುಕಟ್ಟೆಗೆ ತರಕಾರಿ ಖರೀದಿಸಲು ವ್ಯಾಪಾರಿಯೋರ್ವರನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಆಟೋ ರಿಕ್ಷಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಪ್ಪಿನಮೊಗರು ತಲುಪಿದಾಗ ಚಾಲಕ ಹನೀಫ್ ರಿಗೆ ಕಣ್ಣು ಮಂಜದಂತಾಗಿದ್ದು, ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ಸಾರ್ವಜನಿಕರು ಹನೀಫ್ ರನ್ನು ಆರೈಕೆ ಮಾಡಿದ್ದರು. ಬಳಿಕ ಸಾವರಿಸಿಕೊಂಡ ಅವರು ರಿಕ್ಷಾ ಚಲಾಯಿಸಿಕೊಂಡು ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದರೂ ನೇತ್ರಾವತಿ ಸೇತುವೆ ತಲುಪಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
![](https://www.varthabharati.in/sites/default/files/images/galllery/2021/12/3/acc (1).jpeg)