ಕೋವಿಡ್ ನಿಂದ ಮೃತಪಟ್ಟವರಿಗೆ ಪರಿಹಾರ ವಿಚಾರ: ಬಿಪಿಎಲ್ ಕುಟುಂಬದ ಸದಸ್ಯರಾಗಿರಬೇಕೆಂದು ತಿದ್ದುಪಡಿ; ಸಚಿವ ಸುಧಾಕರ್

ಬೆಂಗಳೂರು, ಡಿ. 3: ‘ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ 1ಲಕ್ಷ ಪರಿಹಾರ ನೀಡುವ ಆದೇಶದಲ್ಲಿ ತಿದ್ದುಪಡಿ ತಂದಿದ್ದು, ದುಡಿಯುವ ಪದ ತೆಗೆದು ಹಾಕಿ, ಪರಿಹಾರಕ್ಕೆ ಪರಿಗಣಿಸುವ ಮೃತ ವ್ಯಕ್ತಿ ಬಿಪಿಎಲ್ ಕುಟುಂಬದವರಾಗಿರಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕುಟುಂಬಕ್ಕೆ ಆಸರೆಯಾಗಿರುವ ದುಡಿಯುವ ವ್ಯಕ್ತಿಯು ಕೊರೊನ ಸೋಂಕಿನಿಂದ ಮೃತಪಟ್ಟರೆ ಅಂತಹ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ಸರಕಾರ ಪ್ರಕಟಿಸಿತ್ತು.
ಈ ಕುಟುಂಬದಲ್ಲಿನ ‘ದುಡಿಯುವ' ಮುಖ್ಯ ವ್ಯಕ್ತಿ ಮೃತಪಟ್ಟರೆ ಮಾತ್ರವೇ ಪರಿಹಾರ ಸಿಗುತ್ತದೆ ಎಂಬ ಷರತ್ತು ವಿಧಿಸಲಾಗಿತ್ತು. ಇದರಂತೆ ಆ ಕುಟುಂಬದ ಇತರೆ ಯಾವುದೇ ವ್ಯಕ್ತಿ ಮೃತಪಟ್ಟರೂ, ಅವರು ‘ದುಡಿಯುವ' ವ್ಯಕ್ತಿ ಆಗದ ಕಾರಣ ಆ ಕುಟುಂಬ ಪರಿಹಾರಕ್ಕೆ ಅರ್ಹತೆ ಇರಲಿಲ್ಲ.ಈ ನಿಯಮದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ‘ದುಡಿಯುವ' ಪದವನ್ನು ಕೈ ಬಿಡಲು ನಿರ್ಧರಿಸಿದೆ. ಅಲ್ಲದೆ, ಕೋವಿಡ್ ಸೋಂಕಿನಿಂದಾಗಿ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ, ಯಾವುದೇ ವಯಸ್ಸಿನ ನಿಬಂಧನೆ ಇಲ್ಲದ ಎಲ್ಲ ಕುಟುಂಬದ ಅರ್ಹ ಕಾನೂನುಬದ್ಧ, ವಾರಸುದಾರರಿಗೆ ರಾಜ್ಯ ಸರಕಾರದ 1 ಲಕ್ಷ ರೂ.ಆರ್ಥಿಕ ನೆರವನ್ನು ನೀಡಲಿದೆ ಎಂದು ತಿಳಿಸಲಾಗಿದೆ.







