ಬೈಕ್ಗಳ ಮಧ್ಯೆ ಅಪಘಾತ : ಓರ್ವ ಸವಾರ ಮೃತ್ಯು
ಉಡುಪಿ, ಡಿ.4: ಎರಡು ಬೈಕ್ಗಳ ಮಧ್ಯೆ ದೊಡ್ಡಣಗುಡ್ಡೆಯ ಜಿಲ್ಲಾ ತೋಟಾಗಾರಿಕಾ ಬೆಳೆಗಾರರ ಸಹಕಾರಿ ಸಂಘದ ಕಚೇರಿಯ ಕಟ್ಟಡದ ಎದುರು ಡಿ.3ರಂದು ಸಂಜೆ 7ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಬೈಕ್ ಸವಾರ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಡ್ಡದ ದೇಲಾಪುರ ನಿವಾಸಿ ಲಕ್ಷ್ಮಣ ಎಂದು ಗುರುತಿಸಲಾ ಗಿದೆ. ಅಪಘಾತದಲ್ಲಿ ಸಹವಾರ ಹನುಮಂತ ಹಾಗೂ ಇನ್ನೊಂದು ಬೈಕಿನ ಸವಾರ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಯ ಕಡೆಯಿಂದ ರಸಿಕಾ ಬಾರ್ ಜಂಕ್ಷನ್ ಕಡೆ ಹೋಗುತ್ತಿದ್ದ ಲಕ್ಷ್ಮಣ್ ಅವರ ಬೈಕಿಗೆ ಎದುರಿನಿಂದ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಲಕ್ಷ್ಮಣ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





