ದೇಶದ ಎಲ್ಲ ಮುಸ್ಲಿಮರೂ ಮತಾಂತರಗೊಂಡವರು, ಅವರೆಲ್ಲರ ಘರ್ವಾಪ್ಸಿಗೆ ಬಯಸುತ್ತೇವೆ: ಉ.ಪ್ರ ಬಿಜೆಪಿ ಸಚಿವ

ಲಕ್ನೋ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿರುವ ಸಫೇದ್ ಭವನ್ (ಬಿಳಿ ಕಟ್ಟಡ) ಅನ್ನು ಮುಸ್ಲಿಂ ಸಮುದಾಯ ಹಿಂದುಗಳಿಗೆ ಹಸ್ತಾಂತರಿಸಲು ಮುಂದೆ ಬರಬೇಕು ಹಾಗೂ ದೇಶದ ಎಲ್ಲ ಮುಸ್ಲಿಮರೂ ಮತಾಂತರಗೊಂಡವರು, ಅವರೆಲ್ಲರ ಘರ್ವಾಪ್ಸಿಗೆ ಬಯಸುತ್ತೇವೆ ಎಂದು ಉತ್ತರ ಪ್ರದೇಶ ಸಚಿವ ಆನಂದ್ ಸ್ವರೂಪ್ ಶುಕ್ಲ ಹೇಳಿದ್ದಾರೆ.
"ಅಯ್ಯೋಧ್ಯೆ ವಿವಾದವನ್ನು ನ್ಯಾಯಾಲಯ ಪರಿಹರಿಸಿದೆ ಆದರೆ ಕಾಶಿ ಮತ್ತು ಮಥುರಾದಲ್ಲಿರುವ ಬಳಿ ಕಟ್ಟಡಗಳು ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡುತ್ತಿದೆ" ಎಂದು ಅವರು ಹೇಳಿದ್ದಾರೆ.
"ಪ್ರತಿಯೊಬ್ಬ ಹಿಂದುಗೆ ನೋವುಂಟು ಮಾಡುವ ಈ ಬಿಳಿ ಕಟ್ಟಡವನ್ನು ಕೋರ್ಟ್ ಸಹಾಯದಿಂದ ತೆಗೆಯುವ ಸಮಯ ಬರಬಹುದು. ರಾಮ ಮತ್ತು ಕೃಷ್ಣ ತಮ್ಮ ಪೂರ್ವಜರು, ಬಾಬರ್, ಅಕ್ಬರ್ ಮತ್ತು ಔರಂಗಜೇಬ್ ಆಕ್ರಮಣಕಾರರು ಎಂದು ಭಾರತದ ಮುಸ್ಲಿಮರು ನಂಬಬೇಕು ಎಂಡು ಡಾ ರಾಮ್ ಮನೋಹರ್ ಲೋಹಿಯಾ ಹೇಳಿದ್ದರು. ಅಂತಹ ಆಕ್ರಮಣಕಾರರು ಕಟ್ಟಿದ ಕಟ್ಟಡಗಳ ಜತೆಗೆ ಸಂಬಂಧ ಹೊಂದಬೇಡಿ" ಎಂದು ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಆನಂದ್ ಸ್ವರೂಪ್ ಹೇಳಿದ್ದಾರೆ.
ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಸಯ್ಯದ್ ವಾಸಿಂ ರಿಝ್ವಿ ಅವರು ಹಿಂದು ಧರ್ಮಕ್ಕೆ ಮತಾಂತರಗೊಂಡಿರುವುದನ್ನು ಸ್ವಾಗತಿಸಿದ ಸಚಿವ "ದೇಶದ ಎಲ್ಲಾ ಮುಸ್ಲಿಮರೂ ಮತಾಂತರಗೊಂಡವರು. ಅವರ ಇತಿಹಾಸ ಗಮನಿಸಿದರೆ 200-250 ವರ್ಷಗಳ ಹಿಂದೆ ಅವರು ಹಿಂದು ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದರು. ಅವರೆಲ್ಲರ ಘರ್ ವಾಪ್ಸಿಗೆ ನಾವು ಬಯಸುತ್ತೇವೆ" ಎಂದು ಹೇಳಿದರು.