ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಶೀಘ್ರ: ಸಿ.ಟಿ.ರವಿ

ಚಿಕ್ಕಮಗಳೂರು, ಡಿ.8: ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಬುಧವಾರ ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಲಾಧಾರಣೆ ಮಾಡಿದರು.
ಡಿ.17ರಿಂದ 19ರವರೆಗೆ ನಗರದಲ್ಲಿ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಜಯಂತಿ ಹಿನ್ನೆಲೆಯಲ್ಲಿ ಬುಧವಾರ ಕಾಮಧೇನು ದೇವಾಲಯದ ಆವರಣದಲ್ಲಿ ದತ್ತಾತ್ರೇಯ ಸ್ವಾಮಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಜನೆ ಮಾಡಿದ ಬಳಿಕ ನೂರಾರು ಮುಖಂಡರು, ಕಾರ್ಯಕರ್ತರ ಮಾಲಾಧಾರಣೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ಸಿ.ಟಿ.ರವಿ, ಪ್ರತಿ ವರ್ಷದಂತೆ ಈ ಬಾರಿ ದತ್ತಮಾಲಾಧಾರಣೆ ನಡೆದಿದ್ದು, ನೂರಾರು ಕಾರ್ಯಕರ್ತರು, ಭಕ್ತರು ಮಾಲಾಧಾರಣೆ ಮಾಡಿದ್ದಾರೆ. ತಾನು ವೈಯಕ್ತಿಕ ಕಾರಣದಿಂದಾಗಿ ತಡವಾಗಿ ಮಾಲಾಧಾರಣೆ ಮಾಡುತ್ತೇನೆ ಎಂದ ಅವರು, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಸಂಬಂಧಿಸಿದಂತೆ ನ್ಯಾಯಾಲಯವು ಹಿಂದೂಗಳ ಪರವಾಗಿ ಸಕರಾತ್ಮವಾಗಿ ತೀರ್ಪು ನೀಡಿದೆ. ಸರಕಾರ ಕ್ಯಾಬಿನೆಟ್ನಲ್ಲಿ ಉಪಸಮಿತಿ ರಚಿಸಿದ್ದು, ನ್ಯಾಯ ಸತ್ಯದ ಪರವಾಗಿ ತೀರ್ಪು ಬರಲಿದೆ. ದತ್ತ ಪೀಠಕ್ಕೆ ಮುಂದಿನ ದಿನಗಳಲ್ಲಿ ಹಿಂದೂ ಅರ್ಚಕರು ನೇಮಕವಾಗಲಿದ್ದಾರೆ. ನ್ಯಾಯಲಯ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ಮಾಡಲಿದ್ದು, ಶೀಘ್ರದಲ್ಲಿಯೇ ಅರ್ಚಕರ ನೇಮಕ ಸಂಬಂಧದ ಅಡೆತಡೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಜರಂಗದಳದ ಪ್ರಾಂತೀಯ ಸಹಸಂಯೋಜಕ ರಘು ಸಕಲೇಶಪುರ ಮಾತನಾಡಿ, ದತ್ತಜಯಂತಿ ಅಂಗವಾಗಿ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ದತ್ತಮಾಲಾಧಾರಣೆ ಮಾಡಿದ್ದಾರೆ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಬೇಕು ಎಂಬ ಒತ್ತಾಯದೊಂದಿಗೆ ಈ ಬಾರಿಯ ದತ್ತಜಯಂತಿಯನ್ನು ಪ್ರತಿವರ್ಷದಂತೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಡಿ.17ರಂದು ಜಿಲ್ಲಾ ಕೇಂದ್ರದಲ್ಲಿ ಸಂಕೀರ್ತನಾ ಯಾತ್ರೆ ನಡೆಸಿ ಬಳಿಕ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿದರ್ಗಾಕ್ಕೆ ತೆರಳಿ ದತ್ತ ಪಾದುಕೆ ಹಾಗೂ ಅನುಸೂಯ ದೇವಿ ದರ್ಶನ ಪಡೆಯಲಾಗುವುದು. ಅಲ್ಲಿ ನಡೆಯುವ ಸಮಾವೇಶದಲ್ಲಿ ವಿವಿಧ ಮಠಾಧೀಶ ಗುರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಡಿ.18ರಂದು ಜಿಲ್ಲಾ ಕೇಂದ್ರದಲ್ಲಿ ಶೋಭಾಯಾತ್ರೆ ಹಮ್ಮಿಕೊಂಡಿದ್ದರೇ.ಡಿ.19ರಂದು ದತ್ತ ಮಾಲಾಧಾರಿಗಳು ಹೊನ್ನಮ್ಮನಹಳ್ಳದಲ್ಲಿ ಸ್ನಾನಮಾಡಿ ಅಲ್ಲಿಂದ ಕಾಲ್ನಡಿಗೆ ವಾಹನಗಳಲ್ಲಿ ಪೀಠಕ್ಕೆ ತೆರಳಿ ಸರದಿ ಸಾಲಿನಲ್ಲಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಬಳಿಕ ಪಡಿ ಸಮರ್ಪಿಸಿ ದತ್ತಮಾಲೆ ವಿಸರ್ಜಿಸಿ ಹೋಮ-ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 19ರಂದು ದತ್ತಪಾದುಕೆ ದರ್ಶನಕ್ಕೆ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಭಜರಂಗದಳದ ಜಿಲ್ಲಾ ಸಂಚಾಲಕ ಶಶಾಂಕ್ ಮಾತನಾಡಿದರು. ಈಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಶ್ರೀಕಾಂತ್ಪೈ, ಉಪಾಧ್ಯಕ್ಷ ಯೋಗಿಶ್ ರಾಜ್ಅರಸ್, ವಿಶ್ವಹಿಂದೂ ಪರಿಷತ್ ಭಜರಂಗದಳ ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಿಲ್ಲಾ ಸಂಚಾಲಕ ಅಮಿತ್, ವರಸಿದ್ದಿವೇಣುಗೋಪಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







