ಒಳ್ಳೆಯ ಅಭ್ಯಾಸಗಳನ್ನು ಬೆಳೆಸುವ ಗುರಿಯಲ್ಲಿ ಹರಮಾಲೆ ಯಶಸ್ವಿಯಾಗಲಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಡಿ. 9: ಹರಜಾತ್ರೆಯಲ್ಲಿ ಪಾಲ್ಗೊಳ್ಳುವ ಯುವ ಹಾಗೂ ಉತ್ಸಾಹಿ ಜನರಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸುವ ಹಾಗೂ ಮಾನಸಿಕ ಸ್ಥೈರ್ಯಗಳನ್ನು ಹೆಚ್ಚಿಸುವ ಉದ್ದೇಶದಲ್ಲಿ ಹರಮಾಲೆ ಯಶಸ್ವಿಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ.
ಗುರುವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮಿ ಸಾನಿಧ್ಯದಲ್ಲಿ ಹರಮಾಲೆ ಕಾರ್ಯಕ್ರಮದ ಲೋಗೋ ಹಾಗೂ ಬ್ಯಾನರ್ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸುವ, ಪರಂಪರೆಯನ್ನು ಮುಂದುವರೆಸುವ ಹಾಗೂ ಹೊಸತನ್ನು ತಿಳಿಸಿಕೊಡುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.
ಹರಜಾತ್ರೆಯ ಮೂಲಕ ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಒಗ್ಗೂಡಿಸಿ ಹಲವು ಅತ್ಯಾವಶ್ಯಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಬಾರಿ ಸಮುದಾಯದ ಉತ್ಸಾಹಿ ಯುವಕರಲ್ಲಿ ಮತ್ತಷ್ಟು ಸಾಂಸ್ಕøತಿಕ ಪರಂಪರೆಯನ್ನು ಬೆಳೆಸುವ, ಒಳ್ಳೆಯ ಅಭ್ಯಾಸಗಳನ್ನು ಅವರ ಜೀವನದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಹರಮಾಲೆ ವೃತವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದಾರೆ. ಈ ವೃತದಲ್ಲಿ ನಿಷ್ಠರಾಗಿ ಪಾಲ್ಗೊಳ್ಳುವ ಮೂಲಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ವಚನಾನಂದ ಶ್ರೀಗಳು ಮಾತನಾಡಿ, ಅಂಧಕಾರವನ್ನು ಹೋಗಲಾಡಿಸುವ ಜವಾಬ್ದಾರಿ ಎಲ್ಲ ಗುರುಪೀಠದ್ದಾಗಿರುತ್ತದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಎಲ್ಲ ಸ್ವಾಮೀಜಿಗಳ ಮೂಲ ಕರ್ತವ್ಯ. ಹರಿಹರ ಪಂಚಮಸಾಲಿ ಜಗದ್ಗುರು ಪೀಠ ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟು ಸಾಗುತ್ತಿದೆ. ಕೇವಲ ಪಂಚಮಸಾಲಿಗಳಲ್ಲ ಎಲ್ಲ ವರ್ಗದ, ಎಲ್ಲ್ಲ ಧರ್ಮದ ಜನ ಹರಿಹರ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಬಂದು ಹರನನ್ನ ಭಕ್ತಿಯಿಂದ ಆರಾಧಿಸುತ್ತಾರೆ. ಮಹಾಸನ್ನಿಧಿಯವರ ಆಶೀರ್ವಾದ ಪಡೆಯುತ್ತಾರೆ. ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಕೈಂಕರ್ಯದಲ್ಲಿ ನಮ್ಮದು ಅಳಿಲು ಸೇವೆಯಾಗಿದೆ ಎಂದರು.
ಕೆಲವರು ಬೇಕೋಬೇಡವೋ ಯಾವುದೋ ಒಂದು ಚಟಕ್ಕೆ ದಾಸರಾಗಿರುತ್ತಾರೆ. ಮಾನಸಿಕವಾಗಿ ಸ್ಥೈರ್ಯಗುಂದಿರುತ್ತಾರೆ. ಸಣ್ಣಪುಟ್ಟ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುತ್ತಾರೆ. ಅಂತಃಕರಣ, ಪ್ರೀತಿ ಗೌರವ ಕಳೆದುಕೊಂಡಿರುತ್ತಾರೆ. ಅಯ್ಯೋ ನನಗಿನ್ನೂ ಯಶಸ್ಸು ಸಿಕ್ಕಿಲ್ಲವಲ್ಲ ಅಂತ ಹಪಹಪಿಸುತ್ತಿರುತ್ತಾರೆ. ಜೀವನದ ಹೊಸ್ತಿಲಿನಲ್ಲೇ ಗೊಂದಲಕ್ಕೀಡಾಗಿರುವ ಅಂತಹ ಲಕ್ಷಲಕ್ಷ ಯುವಮನಸುಗಳನ್ನು ಸರಿದಾರಿಗೆ ತರುವ ಹೊಣೆ ನಮ್ಮ ಮೇಲಿದೆ. ಅಧ್ಯಾತ್ಮದ ತೆಕ್ಕೆಗೆ ಅವರನ್ನು ತಂದು, ಹರಸಂಕಲ್ಪ ಮಾಡಿಸಿ ಜೀವನ ಪಯಣಕ್ಕೆ ಹೊಸ ದಾರಿ ತೋರಿಸಬೇಕು. ಆ ಹೊಣೆಯನ್ನು ಅರಿತೇ ನಾವು ಪವಿತ್ರವಾದ ಹರಜಾತ್ರಾ ಮಹೋತ್ಸವದಂದು ಹರಮಾಲೆ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಬಿ.ನಾಗನಗೌಡರು, ನಿಕಟಪೂರ್ವ ರಾಜ್ಯಾಧ್ಯಕ್ಷ ಬಸವರಾಜ್ ದಿಂಡೂರು, ಪೀಠ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಪ್ರಧಾನ ಕಾರ್ಯದರ್ಶಿ ಸಿದ್ದೇಶ ಹನಶಿ, ಚಂದ್ರಶೇಖರ ಪೂಜಾರ, ಸೋಮನಗೌಡ ಪಾಟೀಲ, ವಸಂತ ಹುಲ್ಲತ್ತಿ, ವಕೀಲ ಬಿ.ಎಸ್.ಪಾಟೀಲ್ ಉಪಸ್ಥಿತರಿದ್ದರು.







