ಜನರಲ್ ಬಿಪಿನ್ ರಾವತ್ ಸಾವು ಜನರಲ್ಲಿ ಅನುಮಾನ ಮೂಡಿಸಿದೆ: ಸಂಜಯ್ ರಾವತ್

ಹೊಸದಿಲ್ಲಿ: ಸೇನಾ ಹೆಲಿಕಾಪ್ಟರ್ ಪತನದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿರುವುದು ಜನರ ಮನಸ್ಸಿನಲ್ಲಿ ಅನುಮಾನ ಮೂಡಿಸಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚೀನಾ ಹಾಗೂ ಪಾಕಿಸ್ತಾನದ ವಿರುದ್ಧ ರಾಷ್ಟ್ರದ ಮಿಲಿಟರಿ ಪ್ರತಿಕ್ರಿಯೆಯನ್ನು ರೂಪಿಸುವಲ್ಲಿ ಜನರಲ್ ರಾವತ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ದರಿಂದ ಅಂತಹ ಅಪಘಾತ ಸಂಭವಿಸಿದಾಗ ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ರಾಜ್ಯಸಭಾ ಸದಸ್ಯ ರಾವತ್ ಹೇಳಿದ್ದಾರೆ.
"ಜನರಲ್ ರಾವತ್ ಅವರನ್ನು ಕರೆದೊಯ್ಯುವ ಹೆಲಿಕಾಪ್ಟರ್ ಎರಡು ಎಂಜಿನ್ಗಳಿಂದ ಚಾಲಿತ ಅತ್ಯಾಧುನಿಕ ಯಂತ್ರವಾಗಿತ್ತು. ನಾವು ಸಶಸ್ತ್ರ ಪಡೆಗಳನ್ನು ಆಧುನೀಕರಿಸಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ. ಇದು ಹೇಗೆ ಸಂಭವಿಸಲು ಸಾಧ್ಯ?" ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.
ಈ ಅಪಘಾತದಿಂದ ಇಡೀ ದೇಶ ಹಾಗೂ ನಾಯಕತ್ವವು ಗೊಂದಲಕ್ಕೊಳಗಾಗಿರಬಹುದು. ರಕ್ಷಣಾ ಸಚಿವರು ಅಥವಾ ಪ್ರಧಾನಿ ಎಲ್ಲಾ ಅನುಮಾನಗಳನ್ನು ಹೋಗಲಾಡಿಸಬೇಕು ಎಂದು ರಾವತ್ ಪ್ರತಿಪಾದಿಸಿದರು.





