ಉತ್ತರ ಪ್ರದೇಶ:ನಕಲಿ ಅಂಕಪಟ್ಟಿ ಬಳಕೆ ಆರೋಪ,ಜೈಲು ಶಿಕ್ಷೆಗೆ ಗುರಿಯಾಗಿದ್ದ ಬಿಜೆಪಿ ಶಾಸಕ ಅನರ್ಹ

ಲಕ್ನೊ:ಅಯೋಧ್ಯೆಯ ಗೋಸೈಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ಅಲಿಯಾಸ್ ಖಬ್ಬು ತಿವಾರಿ ಅವರನ್ನು 28 ವರ್ಷಗಳ ಹಿಂದಿನ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದ ನಂತರ ಉತ್ತರಪ್ರದೇಶ ಅಸೆಂಬ್ಲಿಯ ಸದಸ್ಯತ್ವದಿಂದ ಅನರ್ಹ ಗೊಳಿಸಲಾಗಿದೆ ಎಂದು ವಿಧಾನ ಸಭಾ ಸಚಿವಾಲಯ ಗುರುವಾರ ಇಲ್ಲಿ ತಿಳಿಸಿದೆ.
ಕಾಲೇಜಿನಲ್ಲಿ ಪ್ರವೇಶ ಪಡೆಯಲು ನಕಲಿ ಅಂಕಪಟ್ಟಿ ಬಳಸಿದ್ದಕ್ಕಾಗಿ ವಿಶೇಷ ನ್ಯಾಯಾಲಯ ತಿವಾರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ವಿಧಾನಸಭಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ದುಬೆ ಹೊರಡಿಸಿದ ಅಧಿಸೂಚನೆಯ ಪ್ರಕಾರ ಗೋಸೈಗಂಜ್ ಸ್ಥಾನವನ್ನು ಅಕ್ಟೋಬರ್ 18, 2021 ರಿಂದ ತೆರವು ಮಾಡಲಾಗಿದೆ ಎಂದು ಪರಿಗಣಿಸಲಾಗಿದೆ.
ಅಯೋಧ್ಯೆಯ ಸಂಸದ/ಶಾಸಕ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಪೂಜಾ ಸಿಂಗ್ ಅವರು ಅಕ್ಟೋಬರ್ 18 ರಂದು ತೀರ್ಪು ನೀಡಿದ್ದರು. ನಂತರ ತಿವಾರಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಜೈಲಿಗೆ ಕಳುಹಿಸಲಾಯಿತು. ನ್ಯಾಯಾಲಯ ತಿವಾರಿಗೆ 8,000 ರೂಪಾಯಿ ದಂಡವನ್ನೂ ವಿಧಿಸಿತ್ತು. ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಯದುವಂಶ್ ರಾಮ್ ತ್ರಿಪಾಠಿ ಅವರು 1992 ರಲ್ಲಿ ತಿವಾರಿ ವಿರುದ್ಧ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ದಾಖಲಾತಿ ಪಡೆಯಲು ನಕಲಿ ಅಂಕಪಟ್ಟಿ ಬಳಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.