ಇನ್ನೂ ಇವೆಲ್ಲ ಬೇಕೇ?
ಮಾನ್ಯರೇ,
ಒಮೈಕ್ರಾನ್ ನೆಪದಿಂದ ರಾಜ್ಯ ಸರಕಾರ ಮತ್ತೊಮ್ಮೆ ಕಠಿಣ ನಿಯಮಗಳನ್ನು ರೂಪಿಸುವಂತೆ ಕನ್ನಡದ ವಾಹಿನಿಗಳು ಒತ್ತಡ ಹೇರುತ್ತಿದ್ದು, ಮತ್ತೊಮ್ಮೆ ಜನರನ್ನು ಸಂಕಷ್ಟಕ್ಕೆ ತಳ್ಳಲು ಹೊರಟಿವೆ.
ದಿನಗಟ್ಟಲೆ ಲಾಕ್ಡೌನ್, ನೈಟ್ಕರ್ಪ್ಯೂ ಇತ್ಯಾದಿಗಳ ಬಗ್ಗೆ ಬಡಬಡಿಸುವ ವಾಹಿನಿಗಳಿಗೆ ಇಂತಹ ಕಠಿಣ ಕ್ರಮಗಳಿಂದಾಗುವ ಅನಾಹುತಗಳ ಬಗ್ಗೆ ಅರಿವಿದ್ದಂತಿಲ್ಲ.
ಕೋವಿಡ್ ಎರಡು ಅಲೆಯ ನೆಪದಿಂದಾಗಿ ವಿಧಿಸಿದ ಕಠಿಣ ನಿಯಮಗಳಿಂದಾಗಿ ಬಡಜನತೆ ಇನ್ನೂ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ಎಷ್ಟೋ ಜನರು ಇದ್ದ ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ. ಮಕ್ಕಳ ಶಿಕ್ಷಣವೂ ಅತಂತ್ರ ಸ್ಥಿತಿಯಲ್ಲಿದೆ. ಹೀಗಿರುವಾಗ ಮತ್ತೆ ಕಠಿಣ ನಿಯಮಗಳನ್ನು ಹೇರಿದರೆ ಬಡಜನರು ಕೊರೋನಕ್ಕಿಂತಲೂ ಹಸಿವಿನಿಂದಲೇ ಜೀವಬಿಡಬಹುದು.
ಸಾಮಾನ್ಯ ಜನರು ಭಾಗವಹಿಸುವ ಮದುವೆ ಇತ್ಯಾದಿಗಳಿಗೆ ಇಂತಿಷ್ಟೇ ಜನರ ನಿಯಮ ತರಬೇಕು ಎಂದು ಉಪದೇಶ ನೀಡುವ ವಾಹಿನಿಗಳಿಗೆ ರಾಜಕಾರಣಿಗಳ ಚುನಾವಣಾ ಸಭೆಗಳು, ಜಾತ್ರೆಗಳು ಎಂದೂ ನಿಂತಿಲ್ಲದಿರುವುದು ಕಾಣಿಸುತ್ತಿಲ್ಲವೇ?
ಕೊರೋನ ಯಾವತ್ತೂ ಮುಗಿಯದ ಸಮಸ್ಯೆ. ಆದರೆ ಅದು ಸೌಮ್ಯವಾಗುತ್ತಿದೆ ಎಂದು ತಜ್ಞರೇ ಹೇಳುತ್ತಿರುವಾಗ ಮತ್ತೆ ಜನರ ಜೀವ ಹಿಂಡುವ ಕಠಿಣ ನಿಯಮಗಳು ಬೇಕೇ?





