ಕುಂದಾಪುರ: ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗಾಗಿ ಯಕ್ಷ ವೇಷ ಧರಿಸಿ ಸಂತೆಯಲ್ಲಿ ಹಣ ಸಂಗ್ರಹ

ಕುಂದಾಪುರ, ಡಿ.11: ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಬೈಂದೂರು ತಾಲೂಕಿನ ಹೇರೂರು ಗ್ರಾಮದ ಯರುಕೋಣೆಯ ರವೀಂದ್ರ ಪೂಜಾರಿ ಹಾಗೂ ಸುಶೀಲಾ ದಂಪತಿಯ ಪುತ್ರ 6 ವರ್ಷದ ವಂಶಿಕ್ ಎಂಬವರ ಚಿಕಿತ್ಸೆಗಾಗಿ ಹವ್ಯಾಸಿ ಯಕ್ಷಗಾನ ಕಲಾವಿದ ಬೆಂಕಿ ಮಣಿ ಸಂತು ಅರೆಹೊಳೆ, ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯಲ್ಲಿ ಬರುವ ಮೈಧಾವಿನಿ ವೇಷ ಧರಿಸಿ, ಶನಿವಾರ ಕುಂದಾ ಪುರದ ವಾರದ ಸಂತೆಯಲ್ಲಿ ಹಣ ಸಂಗ್ರಹಿಸಿದರು.
ಬೆಂಕಿ ಮಣಿ ಸಂತು ಹಾಗೂ ಅವರೊಂದಿಗೆ ವಂಶಿಕ್ ತಂದೆ ರವೀಂದ್ರ, ನಾಗೇಶ್ ಹಾಗೂ ಸುಜಿತ್ ಸೇರಿ ಕುಂದಾಪುರದ ವಾರದ ಸಂತೆ ಹಾಗೂ ಕುಂದಾಪುರದ ಪೇಟೆಯಲ್ಲಿರುವಅಂಗಡಿಗಳಿಗೆ ತೆರಳಿ ಧನ ಸಂಗ್ರಹಿಸಿದರು. ಅವರಿಗೆ ರಾಘವೇಂದ್ರ ಉಳ್ಳೂರು 74 ಹಾಗೂ ರಾಘವೇಂದ್ರ ಶೆಟ್ಟಿ ಮಡಾಮಕ್ಕಿ ಸಹಕರಿಸಿದರು.
ವಂಶಿಕ್ ಎರಡು ವರ್ಷವಿದ್ದಾಗಲೇ ರಕ್ತದ ಕ್ಯಾನ್ಸರ್ಗೆ ತುತ್ತಾಗಿದ್ದು, ಸತತ ಎರಡೂವರೆ ವರ್ಷದ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಆದರೆ ಈಗ ಮತ್ತೆ ರೋಗ ಉಲ್ಬಣಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಅಂದಾಜು 10 ಲಕ್ಷ ರೂ. ಆಗಬಹುದು ಎಂದು ವೈದ್ಯರು ತಿಳಿಸಿದ್ದು, ಇವರದು ಬಡ ಕುಟುಂಬವಾಗಿದೆ. ಅದಕ್ಕಾಗಿ ಈ ಕುಟುಂಬವು ಸಹೃದಯಿ ದಾನಿಗಳಿಂದ ನೆರವಿಗಾಗಿ ಮನವಿ ಮಾಡಿಕೊಂಡಿದೆ.
ಬ್ಯಾಂಕ್ ವಿವರ ಈ ರೀತಿ ಇದೆ. ಹೆಸರು: ರವೀಂದ್ರ, ಬ್ಯಾಂಕ್: ಕೆನರಾ ಬ್ಯಾಂಕ್, ಶಾಖೆ: ನಾವುಂದ, ಖಾತೆ ಸಂಖ್ಯೆ: 01732200124764, ಐಎಫ್ ಎಸ್ಸಿ ಸಂಖ್ಯೆ: ಸಿಎನ್ಆರ್ಬಿ0010173, ಮೊಬೈಲ್ ಸಂಖ್ಯೆ- 9108414570.
ಇವರು ಕಳೆದ ಎ.10ರಂದು ಕೂಡ ಕುಂದಾಪುರದ ವಾರದ ಸಂತೆಯಲ್ಲಿ ತಲೆಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕ ರಿಷಿಕ್ ಆಚಾರ್ಯ ಪಡುಕೋಣೆ ಅವರ ಚಿಕಿತ್ಸೆಗಾಗಿ ಹೊಯ್ಸಳ ಟ್ರಸ್ಟ್ ನಾಡ ನೇತೃತ್ವದಲ್ಲಿ ಮಹಿಷಾ ಸುರನ ವೇಷ ಧರಿಸಿ ಹಣ ಸಂಗ್ರಹಿಸಿದ್ದರು.









