ರಾಜ್ಯಕ್ಕೆ 275 ಸುಸಜ್ಜಿತ ಪಶು ಸಂಜೀವಿನಿ ಅಂಬ್ಯುಲೆನ್ಸ್: ಸಚಿವ ಪ್ರಭು ಚೌಹಾಣ್
![ರಾಜ್ಯಕ್ಕೆ 275 ಸುಸಜ್ಜಿತ ಪಶು ಸಂಜೀವಿನಿ ಅಂಬ್ಯುಲೆನ್ಸ್: ಸಚಿವ ಪ್ರಭು ಚೌಹಾಣ್ ರಾಜ್ಯಕ್ಕೆ 275 ಸುಸಜ್ಜಿತ ಪಶು ಸಂಜೀವಿನಿ ಅಂಬ್ಯುಲೆನ್ಸ್: ಸಚಿವ ಪ್ರಭು ಚೌಹಾಣ್](https://www.varthabharati.in/sites/default/files/images/articles/2021/12/12/317381-1639319979.jpg)
ಉಡುಪಿ, ಡಿ.12: ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲು ಎಲ್ಲ ತಾಲೂಕು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 275 ಸುಸಜ್ಜಿತವಾದ ಪಶು ಸಂಜೀವಿನಿ ಅಂಬ್ಯುಲೆನ್ಸ್ ನೀಡಲಾಗುವುದು ಎಂದು ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ ರಾಜ್ಯಮಟ್ಟದ ದೇಶೀ ಗೋಪಾಲಕ, ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
1962 ನಂಬರ್ಗೆ ಕರೆ ಮಾಡಿದರೆ ವೈದ್ಯರು ಹಾಗೂ ಚಿಕಿತ್ಸೆ ಬೇಕಾದ ಸಲಕರಣೆಯೊಂದಿಗೆ ಆಂಬ್ಯುಲೆನ್ಸ್ ರೈತರ ಮನೆ ಬಾಲಿಗೆ ಬಂದು ಚಿಕಿತ್ಸೆ ನೀಡಲಿದೆ. ಈಗಾಗಲೇ ಈ ಸಂಬಂಧ ಟೆಂಡರ್ ಆಗಿದೆ ಎಂದರು.
ವೈದ್ಯರ ಬಗ್ಗೆ ದೂರು, ಇಲಾಖೆ ಯೋಜನೆ ಹಾಗೂ ಮಾಹಿತಿಗೆ ಸಂಬಂಧಿಸಿ ದಂತೆ ಈಗಾಗಲೇ ಆರಂಭಿಸಲಾಗಿರುವ ಸಹಾಯವಾಣಿಗೆ ಮೂರು ತಿಂಗಳಲ್ಲಿ 30ಸಾವಿರಕ್ಕಿಂತ ಅಧಿಕ ಕರೆಗಳು ಬಂದಿವೆ. ಈ ಕೇಂದ್ರದಲ್ಲಿ ಮೂರು ಶಿಫ್ಟ್ನಲ್ಲಿ 25 ಸಿಬಂದಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ವೈದ್ಯರ ಬಗ್ಗೆ ದೂರು, ಇಲಾಖೆ ಯೋಜನೆ ಹಾಗೂ ಮಾಹಿತಿಗೆ ಸಂಬಂಧಿಸಿ ದಂತೆ ಈಗಾಗಲೇ ಆರಂಭಿಸಲಾಗಿರುವ ಸಹಾಯವಾಣಿಗೆ ಮೂರು ತಿಂಗಳಲ್ಲಿ 30ಸಾವಿರಕ್ಕಿಂತ ಅಧಿಕ ಕರೆಗಳು ಬಂದಿವೆ. ಈ ಕೇಂದ್ರದಲ್ಲಿ ಮೂರು ಶಿಫ್ಟ್ನಲ್ಲಿ 25 ಸಿಬಂದಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರತಿ ಜಿಲ್ಲೆಯಲ್ಲಿ ಗೋಶಾಲೆ: ಸರಕಾರದಿಂದ ಪ್ರತಿ ಜಿಲ್ಲೆಗಳಲ್ಲಿ ಗೋ ಶಾಲೆಗಳಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ 50ರಿಂದ 100 ಎಕರೆ ಜಾಗವನ್ನು ಗುರುತಿಸಲಾಗುವುದು. ಅಧಿವೇಶನ ಮುಗಿದ ತಕ್ಷಣ ಗೋಶಾಲೆಗಳಲ್ಲಿ ಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಗುಜರಾತಿನಲ್ಲಿ ಪ್ರತಿ ಗೋವುಗಳಿಗೆ 30 ರೂ. ನೀಡಲಾಗುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇನೆ. ಅದರಂತೆ ರಾಜ್ಯದಲ್ಲೂ 30 ರೂ. ಮಾಡುವಂತೆ ಮನವಿ ಮಾಡಿದ್ದೇನೆ. ಒಂದೇ ಒಂದು ಗೋವು ಕಸಾಯಿ ಖಾನೆಗೆ ಹೋಗಬಾರದು ಎಂಬುದು ನಮ್ಮ ಸರಕಾರದ ಗುರಿಯಾಗಿದೆ ಎಂದು ಅವರು ಹೇಳಿದರು.
ಸಮ್ಮೇಳನವನ್ನು ಪರ್ಯಾಯ ಪೀಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಜಿ.ಶಂಕರ್, ದ.ಕ. ಹಾಲು ಉತ್ಪಾದಕರ ಮಹಾಮಂಡಲದ ಅಧ್ಯಕ್ಷ ರವಿರಾಜ ಹೆಗ್ಡೆ, ಸಚಿವರ ಕಾರ್ಯದರ್ಶಿ ಡಾ.ಭಾಸ್ಕರ್, ಪಶುಸಂಗೋ ಪನಾ ಇಲಾಖೆಯ ಅಧಿಕಾರಿಗಳಾದ ಡಾ.ಜಯಪ್ರಕಾಶ್, ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.
ಗೋಸೇವಾ ಗತಿವಿಧಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ ಸರಳಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಠದ ವ್ಯವಸ್ಥಾಪಕ ಗೋವಿಂದ ರಾಜ್ ಸ್ವಾಗತಿಸಿದರು. ಪ್ರೊ.ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
‘ಗೋಹತ್ಯೆ ಬಗ್ಗೆ ಶೇ.100 ನಮ್ಮ ಪರ ತೀರ್ಪು’
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿದೆ. ಇದರ ವಿರುದ್ಧ ಹೈಕೋರ್ಟ್ನಲ್ಲಿ ಕೆಲವರು ಪಿಐಎಲ್ ಹಾಕಿದ್ದಾರೆ. ಆದರೂ ಶೇ.100ರಷ್ಟು ಈ ತೀರ್ಪು ಗೋಮಾತಾ ಪರವಾಗಿ ಬರುತ್ತದೆ ಎಂಬ ಭರವಸೆ ನಮಗೆ ಇದೆ. ಗೋಹತ್ಯೆ ನಿಷೇಧ ಜಾರಿಗೆ ಬಂದ ನಂತರ 500ಕ್ಕಿಂತ ಅಧಿಕ ಪ್ರಕರಣ ಹಾಗೂ 10ಸಾವಿರ ಗೋವುಗಳನ್ನು ರಕ್ಷಣೆ ಮಾಡಿ, ಗೋಶಾಲೆಗಳಿಗೆ ಕಳುಹಿಸಿದ್ದೇನೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಈ ಹಿಂದೆ ಗೋಹತ್ಯೆಗೆ ಕೇವಲ ಒಂದು ಸಾವಿರ ರೂ. ದಂಡ ಮತ್ತು ಆರು ತಿಂಗಳು ಜೈಲುಶಿಕ್ಷೆ ಇತ್ತು. ನಾವು ಅದನ್ನು ಬದಲಾಯಿಸಿ ಮೊದಲ ಬಾರಿಗೆ 50ಸಾವಿರ ರೂ., 2ನೇ ಬಾರಿಗೆ 5ಲಕ್ಷ ಹಾಗೂ 3ನೇ ಬಾರಿಗೆ 10ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ತೀರ್ಪು ನಮ್ಮ ಪರವಾಗಿ ಬಂದ ನಂತರ 10ಲಕ್ಷ ರೂ. ದಂಡ ವಿಧಿಸಿದರೆ ಯಾರು ಕೂಡ ಗೋಹತ್ಯೆ ಮಾಡುವುದಿಲ್ಲ. ಅದೇ ರೀತಿ 3ವರ್ಷದಿಂದ 7ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.
![](https://www.varthabharati.in/sites/default/files/images/galllery/2021/12/12/UD-D12 GOVU1.jpg)