ಉತ್ತರಪ್ರದೇಶ ವಿಧಾನಸಭಾ ಚುನಾವಣೆ:ಇಬ್ಬರು ಹಾಲಿ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

ಲಕ್ನೊ: ಬಿಜೆಪಿ ಹಾಗೂ ಬಿಎಸ್ಪಿಯ ಇಬ್ಬರು ಹಾಲಿ ಶಾಸಕರು ಹಾಗೂ ಮಾಜಿ ವಿಧಾನಪರಿಷತ್ ಸಭಾಧ್ಯಕ್ಷರು ರವಿವಾರ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದರು.
ಶಾಸಕರಲ್ಲಿ ಗೋರಖ್ಪುರದ ಚಿಲ್ಲುಪರ್ ವಿಧಾನಸಭಾ ಕ್ಷೇತ್ರದಿಂದ ಬಿಎಸ್ಪಿಯ ವಿನಯ್ ಶಂಕರ್ ತಿವಾರಿ ಹಾಗೂ ಸಂತ ಕಬೀರ್ ನಗರದ ಖಲೀಲಾಬಾದ್ ಕ್ಷೇತ್ರದಿಂದ ದಿಗ್ವಿಜಯ್ ನಾರಾಯಣ ಅಲಿಯಾಸ್ ಜೈ ಚೌಬೆ ಸೇರಿದ್ದಾರೆ.
2010ರಲ್ಲಿ ಕೌನ್ಸಿಲ್ ಅಧ್ಯಕ್ಷ ಸ್ಥಾನಕ್ಕೆ ಬಿಎಸ್ಪಿಯಿಂದ ಕಣಕ್ಕಿಳಿದಿದ್ದ ಉತ್ತರಪ್ರದೇಶ ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ ಗಣೇಶ್ ಶಂಕರ್ ಪಾಂಡೆ ಕೂಡ ಎಸ್ಪಿಗೆ ಸೇರಿದರು. ಇತರ ನಾಯಕರು, ಹೆಚ್ಚಾಗಿ ಬ್ರಾಹ್ಮಣರು ಎಸ್ಪಿಗೆ ಸೇರಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಹರಿಶಂಕರ್ ತಿವಾರಿ ಅವರ ಪುತ್ರ ವಿನಯ್ ಶಂಕರ್ ತಿವಾರಿ, ಅಖಿಲೇಶ್ ಜನಪ್ರಿಯ ನಾಯಕ ಎಂದು ಬಣ್ಣಿಸಿದರು ಹಾಗೂ ಉತ್ತರಪ್ರದೇಶದ ಸರಕಾರವು ಜನರನ್ನು ವಿಭಜಿಸಿದೆ ಮತ್ತು ದ್ವೇಷವನ್ನು ಹುಟ್ಟುಹಾಕಿದೆ" ಎಂದು ಹೇಳಿದರು. .
Next Story