ಸೋಮವಾರ ನವೀಕೃತ ಕಾಶಿ ವಿಶ್ವನಾಥ ಧಾಮ ಪ್ರಧಾನಿಯಿಂದ ಉದ್ಘಾಟನೆ: ಸಂಸದರಿಗೆ ಬಿರ್ಲಾ ಭವನದಲ್ಲಿ ನೇರ ಪ್ರಸಾರ ವ್ಯವಸ್ಥೆ

ಹೊಸದಿಲ್ಲಿ,ಡಿ.12: ಸೋಮವಾರ ನಡೆಯಲಿರುವ ಪುನರಾಭಿವೃದ್ಧಿಗೊಳಿಸಲಾದ ಕಾಶೀ ವಿಶ್ವನಾಥ ಕ್ಷೇತ್ರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿಯು ತನ್ನ ಸಂಸದರಿಗೆ ಸೂಚನೆ ನೀಡಿದೆ. ಚಳಿಗಾಲದ ಸಂಸತ್ ಅಧಿವೇಶನದ ನಡುವೆಯೇ ಈ ಕಾರ್ಯಕ್ರಮವು ನಡೆಯುತ್ತಿರುವುದರಿಂದ ಸಂಸತ್ ಸದಸ್ಯರಿಗಾಗಿ ಹೊಸದಿಲ್ಲಿಯ ಕೇಂದ್ರ ಭಾಗದಲ್ಲಿರುವ ಬಿರ್ಲಾ ಮಂದಿರದಲ್ಲಿ ನೇರ ಪ್ರಸಾರ ಮಾಡಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂಸದರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಬಿಜೆಪಿಯು ಸಂಸದರಿಗೆ ಸೂಚಿಸಿದೆ. ಸಂಸತ್ ಕಲಾಪಗಳಲ್ಲಿ ಪಾಲ್ಗೊಳ್ಳಲು ಕೆಲವು ಸಂಸದರು ಬಯಸುತ್ತಿರಬಹುದು ಅಥವಾ ಒಂದು ವೇಳೆ ಯಾವುದಾದರೂ ವಿಧೇಯಕವು ಚರ್ಚೆಗೆ ಬರುವ ಸಾಧ್ಯತೆಯಿರುವುದರಿಂದ ಸಂಸದರು ಸದನದಲ್ಲಿ ಉಪಸ್ಥಿತರಿರಬೇಕಾಗುತ್ತದೆ. ಆದರೆ ಮಧ್ಯಾಹ್ನದ ಊಟದ ಸಮಯದ ಆಸುಪಾಸಿನಲ್ಲಿ ಕಾಶಿ ವಿಶ್ವನಾಥ ಧಾಮದ ಉದ್ಘಾಟನಾ ಕಾರ್ಯಕ್ರಮ ಆರಂಭಗೊಳ್ಳುತ್ತದೆ. ಅದರ ನೇರ ಪ್ರಸಾರವನ್ನು ಸಂಸದರು ಬಿರ್ಲಾ ಮಂದಿರದಲ್ಲಿ ವೀಕ್ಷಿಸಬಹುದಾಗಿದೆ ’’ ದಿಲ್ಲಿ ಬಿಜೆಪಿ ವರಿಷ್ಠ ಆದೇಶ್ ಗುಪ್ತಾ ತಿಳಿಸಿದ್ದಾರೆ.
ದಿಲ್ಲಿಯ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾರ್ವಜನಿಕರ ಜೊತೆ ಈ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಮತ್ತು ಉಳಿದ ಸಂಸದರು ಬಿರ್ಲಾ ಮಂದಿರದಲ್ಲಿ ಅದರ ನೇರ ಪ್ರಸಾರವನ್ನು ಕಾಣಬಹುದಾಗಿದೆ ಎಂದರು.
ಉದ್ಘಾಟನೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಲಲಿತಾ ಘಾಟ್ನಿಂದ ಕಾಶಿ ವಿಶ್ವನಾಥ ದೇವಾಲಯದವರೆಗೆ ಪಾದಯಾತ್ರೆ ನಡೆಸಲಿದೆದ್ದಾರೆ ಎಂದರು.
ಸಾಧು,ಸಂತರು ಹಾಗೂ ಸಂಘಪರಿವಾರ ಹಾಗೂ ಧಾರ್ಮಿಕ ಸಂಘಟನೆಗಳ ಪ್ರಮುಖರು ಹಾಗೂ ಗಣ್ಯ ವ್ಯಕ್ತಿಗಳನ್ನು ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದರು.
ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯು ಸನ್ನಿಹಿತವಾಗಿರುವ ಕಾಶೀ ವಿಶ್ವನಾಥ ಧಾಮ್ನ ಉದ್ಘಾಟನೆಗೊಳ್ಳುತ್ತಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ.