ಮಂಗಳೂರಿನ ಈ ಸರಕಾರಿ ಶಾಲೆಯ ಗೋಡೆಗಳೂ ಕಥೆ ಹೇಳುತ್ತವೆ!
ಕಲಾವಿದರ ಕುಂಚದಲ್ಲಿ ಅರಳಿದ ಕಥಾ ಚಿತ್ತಾರ!
![ಮಂಗಳೂರಿನ ಈ ಸರಕಾರಿ ಶಾಲೆಯ ಗೋಡೆಗಳೂ ಕಥೆ ಹೇಳುತ್ತವೆ! ಮಂಗಳೂರಿನ ಈ ಸರಕಾರಿ ಶಾಲೆಯ ಗೋಡೆಗಳೂ ಕಥೆ ಹೇಳುತ್ತವೆ!](https://www.varthabharati.in/sites/default/files/images/articles/2021/12/13/317459-1639388165.jpeg)
ಮಂಗಳೂರು, ಡಿ. 13: ಈ ಸರಕಾರಿ ಶಾಲೆಯ ಪ್ರತಿ ಗೋಡೆಯಲ್ಲೂ ಒಂದೊಂದು ಕಥೆಯಿದೆ. ಕಥೆಗಳ ಹಿಂದೆ ಬಣ್ಣದ ಲೋಕವಿದೆ. ಕಲಾವಿದರ ಕುಂಚದ ಕೈಚಳಕವಿದೆ. ಇದು ನಗರದ ಬೋಳೂರು ಸಮೀಪದ ಬೊಕ್ಕಪಟ್ಣ ದ.ಕ. ಜಿಲ್ಲಾ ಪಂಚಾಯತ್ ಶಾಲೆಯ ವಿಶೇಷತೆ.
ಶಾಲೆಯ ಗೋಡೆಗಳಲ್ಲಿ ಕಥಾ ಚಿತ್ತಾರದ ಮೂಲಕ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಪ್ರಯತ್ನ ನಡೆದಿದೆ. ಮಕ್ಕಳ ಮನಸ್ಸನ್ನು ಚಿತ್ರ ಹಾಗೂ ಕಥೆಗಳು ಬಹುಬೇಗ ಆಕರ್ಷಿಸುತ್ತದೆ. ಹಾಗಾಗಿಯೇ ಕೊರೋನ ಕಾರಣದಿಂದ ಸುಮಾರು ಎರಡು ವರ್ಷಗಳ ಕಾಲ ಶಾಲೆಗಳಲ್ಲಿ ಭೌತಿಕ ತರಗತಿಯ ವಾತಾವರಣದಿಂದ ದೂರವಾಗಿದ್ದ ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಸಲುವಾಗಿ ಬೊಕ್ಕಪಟ್ಣ ಶಾಲೆಯಲ್ಲಿ ಈ ಪ್ರಯತ್ನ ಮಾಡಲಾಗಿದೆ.
ದ.ಕ.ಜಿಲ್ಲೆಯ 17 ಮಂದಿ ಚಿತ್ರಕಲಾ ಶಿಕ್ಷಕರು ತಮ್ಮ ಕಲಾ ಚಿತ್ತಾರದ ಮೂಲಕ ಶಾಲೆಯ ಗೋಡೆಗಳಲ್ಲಿ ಕಥಾ ಹಂದರವನ್ನು ಸೃಷ್ಟಿಸಿದ್ದಾರೆ. ವಿಭಿನ್ನ ಕಥೆಗಳನ್ನು ಹೇಳುವ ಈ ಚಿತ್ತಾರಗಳು ಒಂದಕ್ಕೊಂದು ಭಿನ್ನವಾಗಿದ್ದು, ಕಲಾ ಶಿಕ್ಷಕರ ಜತೆಗೆ ಮಕ್ಕಳು ಕೂಡಾ ವರ್ಲಿ ಚಿತ್ರಗಳ ಮೂಲಕ ತಮ್ಮ ಕಲಾ ಆಸಕ್ತಿಯನ್ನು ಗೋಡೆಗಳಲ್ಲಿ ಪ್ರದರ್ಶಿಸಿದ್ದಾರೆ. ಇದಲ್ಲದೆ ಆವರಣ ಗೋಡೆಯಲ್ಲಿ ನಮ್ಮ ಶಾಲೆ (Our school) ಎಂಬ ಹೆಮ್ಮೆ , ಜಲಪಾತ, ಯೋಗದ ಮಹತ್ವ, ಪ್ರಾಣಿಗಳು, ಪರಿಸರ ಸಮತೋಲನ, ಪುಸ್ತಕ ಮರ, ನಿತ್ಯ ಹರಿಧ್ವರ್ಣ ಕಾಡಿನಲ್ಲಿ ನೀರ ಝರಿ, ಆಝಾದಿ ಕ ಮಹೋತ್ಸವ, ಸ್ವಚ್ಛತೆಯ ಜಾಗೃತಿ, ಪ್ರಕೃತಿಯೊಡನೆ ಸಂಭಾಷಣೆ, ಶಾಲೆಯೊಂದಿಗೆ ಸೆಲ್ಫಿ ಮೊದಲಾದ ಬಣ್ಣ ಬಣ್ಣದ ಚಿತ್ರಗಳು ಇಲ್ಲಿ ಮಕ್ಕಳನ್ನು ಮಾತ್ರವಲ್ಲದೆ ನೋಡುಗರನ್ನೂ ಆಕರ್ಷಿಸುತ್ತವೆ.
ಚಿತ್ರ ಕಲಾವಿದರು, ಮಕ್ಕಳ ಜತೆಗೆ ಶಾಲೆಯ ಹಳೇ ವಿದ್ಯಾರ್ಥಿ ಸಂಘ, ದಾನಿಗಳು, ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ಶಿಕ್ಷಕ ವೃಂದ ಕೂಡಾ ಈ ಕಲಾ ಲೋಕ ಅನಾವರಣಕ್ಕೆ ಸಹಕಾರ ನೀಡಿದೆ.ಶಾಲಾ ಆವರಣ ಗೋಡೆಯಲ್ಲಿ ರೈಲು ಬಂಡಿಯ ಚಿತ್ರ ಬಿಡಿಸಲಾಗಿದ್ದು, ನೋಡುವಾಗ ನೈಜ ರೈಲೊಂದೇ ಕಣ್ಣೆದುರಿಗೆ ಕಂಡ ಅನುಭವ. ಇದಕ್ಕೆ ‘ಬೊಕ್ಕಪಟ್ಣ ಎಕ್ಸ್ಪ್ರೆಸ್’ ಎಂದೂ ಹೆಸರಿಡಲಾಗಿದೆ.
1904ರಲ್ಲಿ ಆರಂಭವಾದ ದ.ಕ ಜಿ.ಪಂ.ಹಿ.ಪ್ರಾ. ಶಾಲೆ ಬೊಕ್ಕಪಟ್ಣ-06 ಖಾಸಗಿ ಶಾಲೆಯ ಸ್ವರೂಪದಲ್ಲಿಯೇ ಗುರುತಿಸಿಕೊಂಡಿದೆ. 1ರಿಂದ 7ನೇ ತರಗತಿ ಇಲ್ಲಿದ್ದು 50 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಕರಾಗಿ ಫೆಲೊರಾ ಶುಭಾವತಿ, ಜಯಲತಾ ಬೋಳೂರು, ಸುಮತಿ ಯು. ಹಾಗೂ ಅಂಬಿಕಾ ಎಚ್.ಆರ್ ಸೇವೆ ಸಲ್ಲಿಸುತ್ತಿದ್ದಾರೆ.
ಚಿತ್ರಕಲಾ ಶಿಕ್ಷಕರಾದ ದಿನೇಶ್ ಶೆಟ್ಟಿಗಾರ್, ಸುಂದರ್, ಮಂಜುನಾಥ್, ಸುಧೀರ್, ರಾಜೇಶ್ವರಿ ಕೆ., ಶಾಲಿನಿ, ಹರ್ಷಿ ಆಚಾರ್ಯ, ಚನ್ನಕೇಶವ ಡಿ ಆರ್, ತಾರನಾಥ ಕೈರಂಗಳ, ಮುರಳೀಧರ ಆಚಾರ್ಯ, ಮುರಳಿ ಕೃಷ್ಣ ರಾವ್, ಧನಂಜಯ ಪಿ., ಉಮೇಶ್, ಬಾಲಕೃಷ್ಣ ಶೆಟ್ಟಿ, ಪ್ರಸನ್ನ ಕುಮಾರ್, ಸುಚೇತ ಮತ್ತು ಒಲಿವಿಯ ಈ ಗೋಡೆಗಳ ಕಥಾ ಚಿತ್ತಾರಕ್ಕೆ ಮಕ್ಕಳ ಜತೆ ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದಾರೆ.
ಶಾಲೆಯಲ್ಲಿ ಅಕ್ಟೋಬರ್ 27ರಿಂದ 29ರವೆರಗೆ ಪ್ರಣತಿ ವರ್ಣ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಸಂದರ್ಭ ಶಾಲೆಯ ಗೋಡೆಗಳಲ್ಲಿ ಈ ಚಿತ್ತಾರಗಳನ್ನು ದ.ಕ. ಜಿಲ್ಲೆಯ 17 ಜನ ಚಿತ್ರಕಲಾ ಶಿಕ್ಷಕರು, ಚಿತ್ರ ಕಲಿತ ಮಿತ್ರರು, ಶಾಲಾ ಮಕ್ಕಳು ಸೇರಿಕೊಂಡು ಬಿಡಿಸಿ ಶಾಲೆಯನ್ನು ಸುಂದರಗೊಳಿಸಿದ್ದಾರೆ. ಶೈಕ್ಷಣಿಕ ಚಟುವಟಿಕೆಯಿಂದ ದೀರ್ಘಕಾಲ ದೂರವಿದ್ದ ಮಕ್ಕಳನ್ನು ಶಾಲಾ ವಾತಾವರಣಕ್ಕೆ ಹೊಂದಿಕೊಂಡು ಬಹಳ ಆನಂದದಿಂದ ಕಲಿಯುವ ಕಲಿಕಾ ಕ್ಷೇತ್ರವನ್ನಾಗಿ ಮಾಡಬೇಕು ಎಂಬ ಆಶಯದಿಂದ ಈ ಕಾರ್ಯ ನಡೆಸಲಾಗಿದೆ. ಶಾಲಾ ಹಳೆ ವಿದ್ಯಾರ್ಥಿ ಸಂಘ, ಶೈಕ್ಷಣಿಕ ಅಭಿಮಾನಿ ದಾನಿಗಳು ಸ್ವಚ್ಛತೆಗಾಗಿ ಶ್ರಮದಾನ ಹಾಗೂ ಬಣ್ಣಗಳ ಪರಿಕರಗಳ ನೆರವು ನೀಡಿದ್ದಾರೆ.
-ಅಂಬಿಕಾ, ಚಿತ್ರಕಲಾ ಶಿಕ್ಷಕರು ದ.ಕ. ಜಿಪಂ ಹಿ.ಪ್ರಾ. ಶಾಲೆ ಬೊಕ್ಕಪಟ್ಣ-06