ಮಥುರಾದಲ್ಲಿ ಮಂದಿರ ನಿರ್ಮಾಣ ಮುಂದಿನ ಗುರಿ: ಸಂಸದ ನಳಿನ್ ಕುಮಾರ್

ಮಂಗಳೂರು, ಡಿ.13: ಅಭಿವೃದ್ಧಿಯ ಜತೆಗೆ ದೇಶದ ಪರಂಪರೆ, ನಂಬಿಕೆ, ಸಾಂಸ್ಕೃತಿಕ ಮೌಲ್ಯಗಳಿಗೆ ಗೌರವ ತರುವ ಕೆಲಸ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಆಗುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ. ಕಾಶಿ, ಕೇದಾರನಾಥ ಕ್ಷೇತ್ರದ ಪುನರುತ್ಥಾನ ಆಗಿದೆ. ಮಥುರಾದಲ್ಲಿ ಮಂದಿರ ನಿರ್ಮಾಣ ನಮ್ಮ ಮುಂದಿನ ಗುರಿ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಆವರಣದಲ್ಲಿ ಸೋಮವಾರ ನಡೆದ ‘ಶ್ರೀ ಕಾಶಿ ವಿಶ್ವನಾಥ ಧಾಮದ ಲೋಕಾರ್ಪಣೆ - ದಿವ್ಯ ಕಾಶಿ ಭವ್ಯ ಕಾಶಿ’ ಸಮಾರಂಭದ ನೇರ ಪ್ರಸಾರ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2014ರ ಬಳಿಕ ದೇಶದಲ್ಲಿ ಆಧ್ಯಾತ್ಮಿಕ ಚಿಂತನೆಗೆ ಬಲ ಬಂದಿದೆ. ವಿದೇಶಿಯರ ದಾಳಿಯಿಂದ ನಲುಗಿದ್ದ ಆಧ್ಯಾತ್ಮಿಕ ಕ್ಷೇತ್ರಗಳ ಪುನರುತ್ಥಾನ ಆಗುತ್ತಿದೆ. ಗಂಗಾನದಿಯ ಸ್ವಚ್ಛತೆ, ಗಂಗಾರತಿಗೆ ಪ್ರಾಮುಖ್ಯತೆ, ಎರಡು ವರ್ಷದೊಳಗೆ ಕೇದಾರಾನಾಥದ ಜೀರ್ಣೋದ್ಧಾರ ಆಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕು, ಬದುಕಿನ ಕೊನೆಯ ಕ್ಷಣಗಳನ್ನು ಕಾಶಿಯಲ್ಲಿ ಕಳೆಯಬೇಕು ಎಂಬುದು ಹಿಂದುಗಳ ನಂಬಿಕೆ. ಅಂತಹಾ ಪವಿತ್ರ ಕ್ಷೇತ್ರವಾದ ಕಾಶಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿಗೊಳಿಸಿರುವುದು ಅಭಿನಂದನೀಯ ಎಂದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ, ಮೇಯರ್ ಪ್ರೇಮಾನಂದ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್ ಉಪಸ್ಥಿತರಿದ್ದರು.
ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿ ರೂಪಾ ಬಂಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ಜಪ್ಪಿನಮೊಗರು ವಂದಿಸಿದರು. ಬಳಿಕ ದಿವ್ಯ ಕಾಶಿ ಭವ್ಯ ಕಾಶಿ ಕಾರ್ಯಕ್ರಮದ ನೇರಪ್ರಸಾರವನ್ನು ಬೃಹತ್ ಪರದೆಯ ಮೂಲಕ ವೀಕ್ಷಿಸಲಾಯಿತು.
"ಯೋಧರ ಸಾವಿನ ಸಂಭ್ರಮಾಚರಣೆ ಮಾಡುವವರ ವಿರುದ್ಧ ದೇಶದ್ರೋಹ ಪ್ರಕರಣ"
ದೇಶದ ಸೇನಾ ಮುಖ್ಯಸ್ಥರು, ಯೋಧರು ಮೃತಪಟ್ಟಾಗ ಸಂಭ್ರಮಾಚರಣೆ ನಡೆಸಿ, ವಿಕೃತವಾಗಿ ವರ್ತಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ವಿಧೇಯಕ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆಶೆ, ಆಮಿಷಗಳನ್ನು ಒಡ್ಡಿ ಮತಾಂತರ ನಡೆಸುವುದಕ್ಕೆ ನಮ್ಮ ವಿರೋಧವಿದೆ. ‘ಲವ್ ಜಿಹಾದ್’ ನಡೆಯುತ್ತಿರುವುದು ನಿಜ ಎಂದು ಕೇರಳದಲ್ಲಿ ನ್ಯಾಯಾಲಯಗಳೇ ಹೇಳಿವೆ. ಲವ್ ಜಿಹಾದ್ ವಿರುದ್ಧವೂ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮಾತುಕತೆ ನಡೆಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಹೇಳಿದರು.











