ಸಂಗೀತ ಕಲಾವಿದರಾದ ಅರ್ಚನಾ-ಸಮನ್ವಿಗೆ ಸುಬ್ಬುಲಕ್ಷ್ಮೀ ಫೆಲೋಶಿಪ್
![ಸಂಗೀತ ಕಲಾವಿದರಾದ ಅರ್ಚನಾ-ಸಮನ್ವಿಗೆ ಸುಬ್ಬುಲಕ್ಷ್ಮೀ ಫೆಲೋಶಿಪ್ ಸಂಗೀತ ಕಲಾವಿದರಾದ ಅರ್ಚನಾ-ಸಮನ್ವಿಗೆ ಸುಬ್ಬುಲಕ್ಷ್ಮೀ ಫೆಲೋಶಿಪ್](https://www.varthabharati.in/sites/default/files/images/articles/2021/12/13/317520-1639414199.jpg)
ಉಡುಪಿ, ಡಿ.13: ಮುಂಬಯಿಯ ಶ್ರೀಷಣ್ಮುಖಾನಂದ ಫೈನ್ ಆರ್ಟ್ಸ್ ಆ್ಯಂಡ್ ಸಂಗೀತ ಸಭಾ ಕೊಡಮಾಡುವ ಪ್ರತಿಷ್ಠಿತ ಡಾ.ಎಂ.ಎಸ್.ಸುಬ್ಬುಲಕ್ಷ್ಮೀ ಫೆಲೋಶಿಪ್ಗೆ ಉಡುಪಿಯ ಯುವ ಸಂಗೀತ ಪ್ರತಿಭೆಗಳಾದ ಅರ್ಚನಾ-ಸಮನ್ವಿ ಜೋಡಿ ಮತ್ತು ಮಂಗಳೂರಿನ ಯುವ ಮೃದಂಗಪಟು ಸುನಾದಕೃಷ್ಣ ಅಮೈ ಆಯ್ಕೆಯಾಗಿದ್ದಾರೆ.
ಶ್ರೀಷಣ್ಮುಖಾನಂದ ಚಂದ್ರಶೇಖರ ಸರಸ್ವತಿ ಸಭಾಂಗಣದಲ್ಲಿ ಡಿ.11ರಂದು ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಅರ್ಚನಾ, ಸಮನ್ವಿ ಮತ್ತು ಸುನಾದಕೃಷ್ಣ ಸಹಿತ ದೇಶಾದ್ಯಂತದ 50 ಮಂದಿ ಪ್ರತಿಭಾವಂತ ಯುವ ಕಲಾವಿದರಿೆ ಫೆಲೋಶಿಪ್ ಪ್ರದಾನ ಮಾಡಿದರು.
ಇವರಲ್ಲಿ 23 ಮಂದಿ ಪ್ರಸಕ್ತ ಸಾಲಿಗೆ ಹಾಗೂ 27 ಮಂದಿ ಕಳೆದ ಸಾಲಿಗೆ ಆಯ್ಕೆಯಾದವರು. ಕರ್ನಾಟಕ ಮತ್ತು ಹಿಂದುಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಯುವ ಪ್ರತಿಭಾನ್ವಿತರಿಗೆ ನೀಡಲಾಗುವ ಫೆಲೋಶಿಫ್ ವಾರ್ಷಿಕ 1 ಲಕ್ಷ ರೂ. ನಗದನ್ನು ಒಳಗೊಂಡಿದೆ. ಇದನ್ನು ಮೂರು ವರ್ಷಗಳ ಕಾಲ ನೀಡಲಾಗುತ್ತದೆ.
ಇದೇ ಸಂದರ್ಭದಲ್ಲಿ ಚೆನ್ನೈಯ ಹಿರಿಯ ಸಂಗೀತ ಗುರು ವಿದುಷಿ ಸೀತಾ ನಾರಾಯಣನ್ ಅವರಿಗೆ ಡಾ.ಎಂ.ಎಸ್. ಸುಬ್ಬುಲಕ್ಷ್ಮೀ ಸಂಗೀತ ಪ್ರಾಚಾರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ 1ಲಕ್ಷ ರೂ. ನಗದು, ಪ್ರಶಂಸಾ ಪತ್ರ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ. ಸಭಾದ ಅಧ್ಯಕ್ಷ ಡಾ.ವಿ. ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಡಾ.ವಿ. ರಂಗರಾಜ್ ವಂದಿಸಿದರು. ಉಪಾಧ್ಯಕ್ಷ ಪಿ.ಸೇತುರಾಮನ್ ಉಪಸ್ಥಿತರಿದ್ದರು.